ಬಂಟ್ವಾಳ: ರಾಜ್ಯ ಪೋಲಿಸ್ ಮಹಾನಿರ್ದೇಶಕರು ಮತ್ತು ರಾಜ್ಯ ಪೋಲಿಸ್ ಮಹಾನಿರೀಕ್ಷಕರ ಆದೇಶದ ಪ್ರಕಾರ ಪೊಲೀಸ್ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧಡೆ ಜಾಗೃತಿ ಕಾರ್ಯಕ್ರಮ ಜರಗಿತು.
ಪುಂಜಾಲಕಟ್ಟೆ ಠಾಣಾ ಎಸ್ಸೈ ಸುನಿತಾ ಅವರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಪುಂಜಾಲಕಟ್ಟೆ-ಮಡಂತ್ಯಾರು ರಿಕ್ಷಾ ಪಾರ್ಕಿಂಗ್ ಪ್ರದೇಶಗಳಿಗೆ ತೆರಳಿ ಚಾಲಕರಿಗೆ ಕಾನೂನು ಅರಿವಿನ ಬಗ್ಗೆ ಸಾಮೂಹಿಕವಾಗಿ ಮಾಹಿತಿ ನೀಡಲಾಯಿತು. ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳಲಿದ್ದು , ಆಟೋ ರಿಕ್ಷಾಗಳಲ್ಲಿ ಮಿತಿಗಿಂತ ಅಧಿಕ ಪ್ರಮಾಣದ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ಹೋಗಬಾರದು ಎಂದು ಸೂಚಿಸಲಾಯಿತು.

ಕಟ್ಟಡ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ ಕಾರ್ಮಿಕರಿಗೆ ವಿಷಯ ಮನದಟ್ಟು ಮಾಡಲಾಯಿತು. ಫ್ಯಾಕ್ಟರಿ, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಯಿತು. ಸರಕು ವಾಹನ ಮಾಲೀಕರು, ಚಾಲಕರ ಸಭೆ ನಡೆಸಿ ಯಾವುದೇ ಕಾರಣಕ್ಕೂ ಈ ವಾಹನಗಳಲ್ಲಿ ಜನರನ್ನೂ ಸಾಗಟ ಮಾಡದಂತೆ ಸೂಚನೆ ನೀಡಲಾಯಿತು. ಒಂದು ವೇಳೆ ಇಂತಹ ವಾಹನಗಳಲ್ಲಿ ಜನರನ್ನು ಸಾಗಾಟ ಮಾಡಿದರೆ ಆ ವಾಹನದ ರಹದಾರಿ ಮತ್ತು ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ತಿಳಿಸಲಾಯಿತು.
ಕಟ್ಟಡ ನಿರ್ಮಾಣ ಸಂಸ್ಥೆಗಳ ಮಾಲಿಕರು ಮತ್ತು ಗುತ್ತಿಗೆದಾರರ ಸಭೆ ನಡೆಸಿ ಕಾರ್ಮಿಕರನ್ನು ಸಾಗಿಸಲು ಸುರಕ್ಷಿತ ವಿಧಾನ ಅನುಸರಿಸುವಂತೆ ಸೂಚಿಸಲಾಯಿತು. ಸಾರಿಗೆ ವಾಹನಗಳಲ್ಲೇ ಕಾರ್ಮಿಕರು ಪ್ರಯಾಣಿಸುವಂತೆ ಸಲಹೆ ನೀಡಿದರು. ಫ್ಯಾಕ್ಟರಿಗಳು ಮತ್ತು ಗಾರ್ಮೆಂಟ್ಸ್ ಗಳಲ್ಲಿ ಸಭೆ ನಡೆಸಿ ಮಾಹಿತಿ ನೀಡಲಾಯಿತು. ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ, ಚರ್ಚೆ, ಪ್ರಬಂಧ ಸ್ಪರ್ಧೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳು, ರಸ್ತೆ ಸುರಕ್ಷತೆ ಬಗ್ಗೆ ಪ್ರಬಂಧ ಸ್ಪರ್ಧೆ, ಚರ್ಚಾಕೂಟವನ್ನು ನಡೆಸಲಾಯಿತು. ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥ ನಡೆಸಲಾಯಿತು. ಠಾಣಾ ಸಿಬಂದಿ ವರ್ಗ ಉಪಸ್ಥಿತರಿದ್ದರು.