ಪುಣಚ: ದೇಗುಲ, ಮಠ, ಮಂದಿರಗಳೆಲ್ಲವುಗಳಿಗೂ ಧರ್ಮವೇ ಮೂಲಾಧಾರವಾಗಿದೆ. ಜಾತ್ಯಾತೀತತೆಯ ನೆಪದಲ್ಲಿ ದೇಶದಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆಯಾಗುತ್ತಿದೆ. ಹಿಂದೂ ಪುರಾಣ, ಶಾಸ್ತ್ರ, ಆಚಾರವಿಚಾರಗಳ ಬಗ್ಗೆ ಅನಗತ್ಯ ತಪ್ಪು ಸಂದೇಶಗಳು ಹರಿದಾಡುತ್ತಿರುವುದರಿಂದ ಅಪನಂಬಿಕೆ ಹೆಚ್ಚಾಗುತ್ತಿದೆ. ಸ್ವಾರ್ಥ ಲಾಲಸೆ ಮಿತಿಮೀರುತ್ತಿರುವುದು ಧರ್ಮ ಸಂಕಟಕ್ಕೆ ಕಾರಣವಾಗುತ್ತಿದ್ದು, ಸ್ವಾಭಿಮಾನದೊಂದಿಗೆ ಧರ್ಮ ಜಾಗೃತಿಗೊಳಿಸುವ ಕಾರ್ಯವಾಗಬೇಕಾಗಿದೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.
ಅವರು ಗುರುವಾರ ಪುಣಚ ಗ್ರಾಮದ ನಿಡ್ಯಾಳಗುತ್ತು ತರವಾಡು ಮನೆಯ ಗೃಹ ಪ್ರವೇಶ ಮತ್ತು ದೈವಗಳ ಪ್ರತಿಷ್ಠೆಯ ಬಳಿಕ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಧಾರ್ಮಿಕ ಉಪನ್ಯಾಸ ನೀಡಿದರು. ಭಾರತದ ಸಂಸ್ಕøತಿ ವಿಶ್ವಮಾನ್ಯವಾಗಿದೆ. ಪ್ರೀತಿ, ವಿಶ್ವಾಸ, ಸಹಿಷ್ಣುತೆಯ ಮನೋಧರ್ಮ ನಮ್ಮ ದೇಶದ ಹೆಗ್ಗಳಿಕೆಯಾಗಿದೆ. ಲೌಕಿಕ ಬದುಕಿನೊಂದಿಗೆ ಅಲೌಕಿಕ ಸಂವೇದನೆಯ ಸ್ಪರ್ಶ ಸಿಕ್ಕಿದಾಗ ಪೂರ್ಣತ್ವದ ಬದುಕೆನಿಸುತ್ತದೆ ಎಂದ ಅವರು ಧರ್ಮದ ಉಳಿವಿಗಾಗಿ ನಾವು ತ್ಯಾಗಪರರಾಗಬೇಕೆಂದು ತಿಳಿಸಿದರು.
ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತಕ ಸಜೇಶ್ ಮುಳ್ಳೇರಿಯ, ಕ್ಷೇತ್ರದ ವಾಸ್ತುಶಿಲ್ಪಿ ರಾಧಾಕೃಷ್ಣ ಆಚಾರ್ಯ, ತರವಾಡಿನ ಹಿರಿಯರಾದ ಚೆನ್ನಪ್ಪ ಗೌಡ ನಿಡ್ಯಾಳಗುತ್ತು, ಶೀನಪ್ಪ ಗೌಡ ನಿಡ್ಯಾಳಗುತ್ತು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಟ್ಲ ಸೀಮೆಯ ಅರಸರನ್ನು, ಕ್ಷೇತ್ರದ ತಂತ್ರಿವರ್ಯರನ್ನು, ವಾಸ್ತುಶಿಲ್ಪಿ ಹಾಗೂ ಇತರ ಕಾಮಗಾರಿಗಳನ್ನು ನಿರ್ವಹಿಸಿದ ಮಹನೀಯರುಗಳನ್ನು ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ನಿಡ್ಯಾಳಗುತ್ತು ಸ್ವಾಗತಿಸಿದರು. ಶಶಿಧರ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ತರವಾಡು ಮನೆಯ ಗೃಹ ಪ್ರವೇಶ, ಶ್ರೀಸತ್ಯನಾರಾಯಣ ಪೂಜೆ, ಹರಿಸೇವೆ, ರುದ್ರ ಚಾಮುಂಡಿ, ಸತ್ಯಜ್ಯಾವತೆ, ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಿತು.














