ಬಂಟ್ವಾಳ: ಖಾಸಗಿ, ಸರಕಾರಿ ಬಸ್ ಗಳನ್ನು ಬಿ.ಸಿ.ರೋಡ್ ನ ಒಳರಸ್ತೆಗೆ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಬಿ.ಸಿ.ರೋಡ್-ಕೈಕಂಬ ಆಟೋ ರಿಕ್ಷಾ ಚಾಲಕರು ಸೋಮವಾರ ಇಲ್ಲಿನ ಮೇಲ್ಸೆತುವೆಯಲ್ಲಿ ದಿಢೀರನೆ ಪ್ರತಿಭಟನೆ ನಡೆಸಿದರು.
ಈ ಮೊದಲು ವಿವಿಧೆಡೆಯಿಂದ ಎಲ್ಲ ಬಸ್ ಗಳು ಬಿ.ಸಿ.ರೋಡ್ ನ ಜಂಕ್ಷನ್ ಗೆ ಬಂದು ತೆರಳುತ್ತಿದ್ದವು. ಇಲ್ಲಿನ ಪಕ್ಕದಲ್ಲಿ ಯೇ ಆಟೋ ರಿಕ್ಷಾ ತಂಗುದಾಣವಿದ್ದು , ಇದರಿಂದ ಆಟೊ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸುಲಭವಾಗುತ್ತಿತ್ತು.
ಆದರೆ, ಇದೀಗ ಯಾವುದೇ ಮಾಹಿತಿ ನೀಡದೇ ದಿಢೀರನೆ ಬಸ್ ಗಳ ಸಂಚಾರವನ್ನು ನಿರ್ಬಂಧಿಸಿರುವುದು ಸರಿಯಲ್ಲ. ಇದರಿಂದ ಆಟೋ ಚಾಲಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಟೊ ಚಾಲಕರು ದೂರಿಕೊಂಡರು.
ಬಳಿಕ ಆಟೊಚಾಲಕರು ಹೆದ್ದಾರಿ ಯಲ್ಲಿ ಬರುತ್ತಿದ್ದ ಬಸ್ ಗಳನ್ನು ತಡೆದು ನಿಲ್ಲಿಸಿ, ಬಿ.ಸಿ.ರೋಡಿನ ಕೆಳರಸ್ತೆಯಲ್ಲಿ ಸಂಚರಿಸುವಂತೆ ಮುಂದಾದಾಗ ಪೊಲಿಸರು ತಡೆವೊಡ್ಡಿದರು.



ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಬಂಟ್ವಾಳ ಕ್ರೈಂ ಎಸ್ಸೈ ಸುಧಾಕರ್ ಜಿ.ತೋನ್ಸೆ ಧಾವಿಸಿ, ಆಟೊ ಚಾಲಕರೊಂದಿಗೆ ಮಾತುಕತೆ ನಡೆಸಿದರು.
ಬಸ್ ಗಳ ಸಂಚಾರ ನಿರ್ಬಂಧಿಸಿದಕ್ಕೆ ಆಟೊ ಚಾಲಕರು ಒಮ್ಮತದಿಂದ ಆಕ್ಷೇಪ ವ್ಯಕ್ತಪಡಿಸಿದಾಗ, ಬಂಟ್ವಾಳ ಎಎಸ್ಪಿ ಅವರ ನಿರ್ದೇಶನ ಮೇರೆಗೆ ಬಿ.ಸಿ.ರೋಡ್ ಒಳರಸ್ತೆಯಲ್ಲಿ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಎಎಸ್ಪಿ ಅವರೊಂದಿಗೆ ಮಾತುಕತೆಗೆ ತೆರಳುವಂತೆ ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ಎಸ್ಸೈ ಸುಧಾಕರ್ ಅವರು ಚಾಲಕರಿಗೆ ತಿಳಿಸಿದರು.
ಬಳಿಕ ಆಟೊ ಚಾಲಕರು ಪ್ರತಿಭಟನೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಎಎಸ್ಪಿ ಕಚೇರಿಯತ್ತ ತೆರಳಿದರು.

