ಕೈಕಂಬ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ಜಾತ್ರೆಯ ಬಹುನಿರೀಕ್ಷಿತ ದಿನನಿಗದಿಪಡಿಸುವ ವಿಶಿಷ್ಠ ಸಾಂಪ್ರದಾಯವಾಗಿರುವ ಕದ್ರ್ ಮುಡಿಏರಿಸಿ ‘ಕುದಿ’ ಕರೆಯಲಾಗಿದ್ದು, ‘29 ಪೋಪಿನಾನಿ ದಿನತ್ತಾನಿ ಆರಡ?’ ಎನ್ನುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ. ‘ಈ ಸರ್ತಿ ೨೯ ದಿನ ಮುಗುಲಿ ಬೈದ್ಂಡ್.. ಅಪ್ಪೆ ಬಾರಿ ಕುಸಿಟ್ ಉಲ್ಲೆರ್’ ಎನ್ನುವ ಮೂಲಕ ಭಕ್ತರು ಸಂತಸ ವ್ಯಕ್ತಪಟ್ಟರು. ಪೊಳಲಿಯ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳುತ್ತಿದ್ದಂತೆ ೨೯ ದಿನಗಳ ಅದ್ಧೂರಿ ಜಾತ್ರೆ ನಡೆಯಲಿದೆ.


ಶನಿವಾರ ರಾತ್ರಿ ನಂದ್ಯ ಕ್ಷೇತ್ರದಿಂದ ಹಾಗೂ ಮಳಲಿ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು. ಗುರುವಾರ ರಾತ್ರಿ ಧ್ವಜಾರೋಹಣಗೊಂಡು ಜಾತ್ರೆ ಆರಂಭಗೊಂಡಿತು. ಕೊಡಿಬಲಿ ನಡೆದ ಬಳಿಕ ಮುಂಜಾವಿನ ವೇಳೆ ಕಂಚುಬೆಳಕು(ಕಂಚಿಲ್) ಬಲಿ ಉತ್ಸವ ನಡೆಯಿತು. ನೂರಾರು ಮಂದಿ ಕಂಚಿಲ್ ಸೇವೆಯ ಹರಕೆ ತೀರಿಸಿಕೊಂಡರು. ಕಂಚಿಲ್ನ ಬಳಿಕ ಸಣ್ಣರಥೋತ್ಸವ ನಡೆಯಿತು.
ಮುನ್ನಾದಿನ ಪುತ್ತಿಗೆ ಸೋಮನಾಥನಲ್ಲಿಗೆ ದಿನನಿಗದಿಗೆ ತೆರಳಲಾಗಿತ್ತು. ಇಂದು ಬೆಳಿಗ್ಗೆ ಜೋಯಿಸರು ಹಿಂಗಾರದ ಸಿರಿಯನ್ನು ಹಿಡಿದು ದುರ್ಗಾಪರಮೇಶ್ವರಿ ಗುಡಿಯ ಬಳಿ ಬಂದು ವಾಲಗ ಊದುವ ಸೇರಿಗಾರನ ಬಳಿ ಜಾತ್ರಾ ದಿನಗಳ ಅವಧಿಯ ಬಗ್ಗೆ ಗುಟ್ಟಾಗಿ ಹೇಳಿದರು. ಪ್ರಮಾಣ ಬಾವಿಯ ಬಳಿ ಭಗವತೀ ದೇವಿಯ ಕದೃ ಮುಡಿ ಏರಿದ ನಂತರ ಸೋಮಕಾಸುರ ಮತ್ತು ರೆಂಜಕಾಸುರ(ದೈವಗಳು) ವೇಷಧಾರಿ ದೈವ ಪಾತ್ರಿಗಳು ಗೋಪುರದ ಬಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ವಿಧಿವಿಧಾನಗಳನ್ನು ಪೂರೈಸಿಕೊಂಡರು.

ಸೇರಿಗಾರರ ನಿಧಾನವಾಗಿ ಬರುತ್ತಿದ್ದಂತೆ ಸಭೆಯಲ್ಲಿ ಮೌನ ಆವರಿಸಿತ್ತು. ಸೇರಿಗಾರನು ಗುಟ್ಟಾಗಿ ದೈವ ಪಾತ್ರಿಯ ಕಿವಿಯಲ್ಲಿ ಹೇಳುತ್ತಿದ್ದಂತೆ ಭಕ್ತರು ಕಿವಿ ಅಗಲಿಸಿ ನಿಂತಿದ್ದರು.

ದೈವಪಾತ್ರಿಯು ‘29 ಪೋಪಿನಾನಿ ಅಯಿತ್ತಾರ ದಿನತ್ತಾನಿ ಆರಡ’ ಎನ್ನುತ್ತಿದ್ದಂತೆ ಜನರೆಲ್ಲಾ ಬಾರೀ ಎಡ್ಡೆ ದಿನ ಎನ್ನುವ ಉದ್ಘಾರ ಹೊರಬಂದಿತು.
ಒಟ್ಟು 29 ದಿನಗಳ ಜಾತ್ರೆ: ಐದು ದಿನಗಳ ಚೆಂಡು:
ಮಾರ್ಚ್ 15ರಿಂದ ಜಾತ್ರೆ ಆರಂಭ
ಎಪ್ರಿಲ್ 6 ಸೋಮವಾರ ಮೊದಲ ಚೆಂಡು
ಎಪ್ರಿಲ್ 7 ಮಂಗಳವಾರ ಎರಡನೇ ಚೆಂಡು
ಎಪ್ರಿಲ್ 8 ಬುಧವಾರ ಮೂರನೇ ಚೆಂಡು
ಎಪ್ರಿಲ್ 9 ಗುರುವಾರ ನಾಲ್ಕನೇ ಚೆಂಡು
ಎಪ್ರಿಲ್ 10 ಶುಕ್ರವಾರ ಕಡೇ ಚೆಂಡು
ಎಪ್ರಿಲ್ 11 ಶನಿವಾರ ಮಹಾ ರಥೋತ್ಸವ
ಎಪ್ರಿಲ್ 12 ಭಾನುವಾರ ಆರಡ(ಅವಭೃತ ಸ್ನಾನ)
ಇದಲ್ಲದೆ 5 ದಿನಕ್ಕೊಮ್ಮೆ ದಂಡಮಾಲೆ, ಕೋಳಿ ಗುಂಟ, ಜಾತ್ರೆ ಕೊನೆಗೊಂಡ ಬಳಿಕ ಕೊಡಮಣಿತ್ತಾಯಿ-ಉಳ್ಳಾಕುಲು-ಮಗೃಂತಾಯಿ-ಬಂಟ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ.


