ಬಂಟ್ವಾಳ: ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ದಿಗಾಗಿ ಮಾ.1 ರಿಂದ ಮಾ.07 ರ ವರೆಗೆ ಪೊಳಲಿ ಶ್ರೀ ದುರ್ಗಾಪರಮೇಶ್ವರಿ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಬ್ರಹ್ಮ ಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗರ್ಶನದಲ್ಲಿ ಶತಚಂಡಿಕಾಯಾಗ ಹಾಗೂ ಸೇವಾರೂಪದಲ್ಲಿ ದೊಡ್ಡರಂಗಪೂಜೆ ಉತ್ಸವ ಜರಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಅವರು ಪೊಳಲಿ ಸರ್ವಮಂಗಲ ಕಲ್ಯಾಣ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಪ್ರವರ್ಗ ‘ಎ’ ಗೆ ಸೇರಿದ ದೇವಸ್ಥಾನವಾಗಿರುತ್ತದೆ. ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತ ಪರಿಹಾರವಾಗಿ ಮಾ. 05 ರಂದು ಸಾವಿರ ಸೀಮೆಯವರು ಸೇರಿ ಶತಚಂಡಿಕಾಯಾಗ ಹಾಗೂ ಮಾ. 06 ರಂದು ಸೇವಾ ರೂಪದಲ್ಲಿ ದೊಡ್ಡರಂಗಪೂಜೆ ನಡೆಯಲಿದೆ. ಮಾ. 01 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
*ಕಾರ್ಯಕ್ರಮದ ವಿವರಗಳು* :-
ಮಾ.01ರ ಶನಿವಾರ ಬೆಳಿಗ್ಗೆ ಗಂಟೆ 8.00 ರಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ.
ಮಾ. 02 ರ ಆದಿತ್ಯವಾರ ಬೆಳಿಗ್ಗೆ ಗಂಟೆ 7.30 ರಿಂದ ಪಾರಾಯಣ, ನವಾಕ್ಷರೀ ಜಪ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯ ಸಹಸ್ರನಾಮ ಹೋಮ ಸಾಯಂಕಾಲ ಗಂಟೆ 3.30 ರಿಂದ ಶ್ರೀ ಚಕ್ರಪೂಜೆ.
ಮಾ.03 ರ ಸೋಮವಾರ ಬೆಳಿಗ್ಗೆ ಗಂಟೆ 7.30 ರಿಂದ ಪಾರಾಯಣ, ನವಾಕ್ಷರೀ ಜಪ, ನವಗ್ರಹ ಹೋಮ.
ಮಾ.04 ರ ಮಂಗಳವಾರ ಬೆಳಿಗ್ಗೆ ಗಂಟೆ 7.30 ರಿಂದ, ಕಾಳಿ ಸಹಸ್ರನಾಮಹೋಮ, ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ, ಸಾಯಂಕಾಲ ಗಂಟೆ 4.00 ರಿಂದ ಮಂಟಪ ಸಂಸ್ಕಾರ, ಪ್ರಾಸಾದ ಶುದ್ದಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ಅಗ್ನಿ ಜನನ ಸಂಸ್ಕಾರ.
ಮಾ.05 ರ ಬುಧವಾರ ಶತಚಂಡಿಕಾಯಾಗ ಬೆಳಿಗ್ಗೆ ಗಂಟೆ 6.00 ರಿಂದ ಚಂಡಿಕಾಯಾಗ ಆರಂಭ, ಗಂಟೆ 10.30 ಕ್ಕೆ ಹೋಮಪೂಜೆ, ಪೂರ್ಣಾಹುತಿ ಗಂಟೆ 12.00 ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣಿ, ಪಲ್ಲಪೂಜೆ, ಅನ್ನಸಂತರ್ಪಣೆ.
ಮಾ.06 ರ ಗುರುವಾರ ದೊಡ್ಡ ರಂಗಪೂಜೆ ಉತ್ಸವ ಬೆಳಿಗ್ಗೆ ಗಂಟೆ 7.30 ರಿಂದ ಗಣಪತಿಹೋಮ, ಕಲಶಪೂಜೆ, ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ಸಾಯಂಕಾಲ 6.30 ಕ್ಕೆ ಮಹಾಪೂಜೆ, 7.30 ಕ್ಕೆ ದೊಡ್ಡರಂಗಪೂಜೆ 8.30 ರಿಂದ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ರಥ, ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ.
ಮಾ. 07ರ ಶುಕ್ರವಾರ ಬೆಳಿಗ್ಗೆ ಗಂಟೆ 7.30 ರಿಂದ ಕಲಶಪೂಜೆ, ಗಣಪತಿಹೋಮ, ಪ್ರಧಾನ ಹೋಮ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.
*ಕಾರ್ಯಕ್ರಮ ಯಶಸ್ವಿಗಾಗಿ ಪೂರ್ವ ಸಿದ್ದತೆ*
ಆರು ವರ್ಷಗಳ ಹಿಂದೆ ಇಲ್ಲಿ ದೇವರ ಆಶ್ರೀರ್ವಾದದಿಂದ ಬಹಳ ಯಶಸ್ವಿಯಾಗಿ ನಡೆದಿತ್ತು. ಅದೇ ರೀತಿಯಲ್ಲಿ ಶತಚಂಡಿಕಾಯಾಗ ಹಾಗೂ ದೊಡ್ಡ ರಂಗ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ಯೋಜನೆ ತಯಾರಿಸಲಾಗಿದೆ.
ಈಗಾಗಲೇ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಸರ್ವರ ಸಹಕಾರವನ್ನು ಯಾಚಿಸುವುದಾಗಿ ತಿಳಿಸಿದರು.
ಈಗಾಗಲೇ ಪ್ರತಿ ಮನೆಮನೆಗೆ ಆಮಂತ್ರಣ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ.
ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ 15 ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಶತಚಂಡಿಕಾಯಾಗಕ್ಕೆ ಸುಮಾರು 25 ಸಾವಿರ ಜನ ಭಕ್ತಾದಿಗಳು ಬರುವ ನಿರೀಕ್ಷೆ ಇದ್ದು,ಮತ್ತು ದೊಡ್ಡರಂಗಪೂಜೆಗೆ ಸುಮಾರು 25 ಸಾವಿರ ಜನ ಭಕ್ತಾದಿಗಳು ಬರುವ ನಿರೀಕ್ಷೆ ಇದೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಚೆಂಡಿನಗದ್ದೆಯಲ್ಲಿ ಮಾಡಲಾಗುವುದು. ಹಾಗೂ ಶತಚಂಡಿಕಾಯಾಗಕ್ಕೆ ಬರುವ ಭಕ್ತಾದಿಗಳಿಗೆ ಬೆಳಿಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ದೇವಳಕ್ಕೆ ಬರುವ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಹೋಗಲು ವ್ಯವಸ್ಥಿತವಾಗಿ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯಕ್ರಮ ಯಶ್ವಸಿಯಾಗಿ ನೆರೆವೇರಲು ಸಂಘ ಸಂಸ್ಥೆಗಳ ಸ್ವಯಂ ಸೇವಕರು ತಮ್ಮ ತಂಡದ ಹೆಸರನ್ನು ನೋಂದಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಡಾ|ಮಂಜಯ್ಯ ಶೆಟ್ಟಿ, ಅರ್ಚಕರಾದ ಪದ್ಮನಾಭ ಭಟ್, ಅನಂತ ಪದ್ಮನಾಭ ಭಟ್ ಉಪಸ್ಥಿತರಿದ್ದರು.
