ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮುಂದುವರಿಯಲಿದ್ದು, ನವೆಂಬರ್ ಅಂತ್ಯದವರೆಗೆ ಉಚಿತ ಪಡಿತರ ವಿತರಣೆ ಆಗಲಿದೆ ಎಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಹೇಳಿದ್ದಾರೆ.

ಇದರಿಂದ 80 ಕೋಟಿಯಷ್ಟು ಬಡ ಜನರಿಗೆ ಅನುಕೂಲವಾಗಲಿದ್ದು, 5 ಕೆ.ಜಿ ಅಕ್ಕಿ ಅಥವಾ ಗೋಧಿಯೊಂದಿಗೆ ಬೇಳೆಯನ್ನು ಉಚಿತವಾಗಿ ಸರ್ಕಾರ ನೀಡಲಿದೆ. ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ಯೋಜನೆ ಜಾರಿಯಾಗಿದ್ದು, ಬಡ ಕುಟುಂಬದ ಪ್ರತಿಯೊಬ್ಬರಿಗೂ ನವೆಂಬರ್ ಅಂತ್ಯದವರೆಗೆ ಪಡಿತರ ಜಾರಿಯಾಗಲಿದೆ ಎಂದು ಹೇಳಿದ್ದಾರೆ.
ಇದರೊಂದಿಗೆ ಜೂನ್ 1 ರಂದು `ಅನ್ಲಾಕ್ 1 ‘ನಂತರ ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯಲ್ಲಿ ಜನರ ನಿರ್ಲಕ್ಷ್ಯ ಹೆಚ್ಚುತ್ತಿದೆ. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಜನ ಎಚ್ಚರಿಕೆ ವಹಿಸಬೇಕು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಮಳೆಗಾಲದಲ್ಲಿ ಕೆಮ್ಮು ಮತ್ತು ಶೀತದ ಸಾಕಷ್ಟು ಎಚ್ಚರಿಕೆ ವಹಿಸಿ ಎಂದು ಕರೆ ನೀಡಿದ್ದಾರೆ.
ಕೊರೋನ ವೈರಸ್ ಕಾರಣದಿಂದಾಗಿ ನಾವು ಸಾವಿನ ಪ್ರಮಾಣವನ್ನು ತುಲನೆ ಮಾಡಿದರೆ ಭಾರತವು ವಿಶ್ವದ ಹಲವು ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ. ಸಮಯೋಚಿತ ಲಾಕ್ಡೌನ್ ಮತ್ತು ಇತರ ನಿರ್ಧಾರಗಳು ಭಾರತದ ಲಕ್ಷಾಂತರ ಜನರ ಜೀವವನ್ನು ಉಳಿಸಿವೆ “ಎಂದು ಅವರು ಹೇಳಿದ್ದಾರೆ.

