ವಿಟ್ಲ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ತುಳುನಾಡ್ದ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ 24ನೇ ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಬಂಧುಗಳಿಗೆ ಅಭಿನಂದನಾ ಸಭೆ ನಡೆಯಿತು.

ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ,ಸಮರ್ಪಣಾ ಭಾವದಿಂದ ಮಾಡುವ ಕಾರ್ಯಕ್ಕೆ ಭಗವಂತನ ಅನುಗ್ರಹವಿರುತ್ತದೆ. ಕೃತಜ್ಞತೆ ಹಾಗೂ ಕೃತಘ್ನತೆ ನಡುವಿನ ವ್ಯತ್ಯಾಸ ತಿಳಿದಾಗ ಕಾರ್ಯಕ್ರಮಗಳನ್ನು ಯಶಸ್ಸಿಗೊಳಿಸಬಹುದು. ಕರ್ತವ್ಯದ ಬಗ್ಗೆ ಪ್ರತಿಯೊಬ್ಬರಿಗೆ ಅರಿವು ಇದ್ದಾಗ ಕೆಲಸಗಳು ನಡೆದುಕೊಂಡು ಹೋಗುತ್ತದೆ. ರಥೋತ್ಸವ ಎಂಬುದು ಪುಣ್ಯ ಸಂಚಯನದ ಕಾರ್ಯವಾಗಿದೆ. ಪ್ರತಿಯೊಬ್ಬರು ಗುರು ಸೇವಕರಾದಾಗ ಕಾರ್ಯಕ್ರಮ ಯಶಸ್ಸಿಯಾಗುತ್ತದೆ. ಕೃಷ್ಣ ಜನ್ಮ ಭೂಮಿಗೆ ಶೀಘ್ರ ಮುಕ್ತಿಯಾಗಬೇಕಾಗಿದೆ. ಒಗ್ಗಟ್ಟಿನಿಂದ ಮಾಡುವ ಕೆಲಸದಲ್ಲಿ ಯಾವುದೇ ಲೋಪ ಬರುವುದಿಲ್ಲ. ರಾಮನ ಕಾರ್ಯದಲ್ಲಿ ಹನುಮಂತನ ರೀತಿಯಲ್ಲಿದ್ದ ಸೇವಾಕರ್ತರಿಗೆ ಅಭಿನಂದನೆ ನೀಡಬೇಕಾಗಿದೆ. ಕಾರ್ಯಕ್ರಮದಲ್ಲಿ ಯುವಶಕ್ತಿ ಬೆನ್ನೆಲುಬಿನಂತೆ ಶಕ್ತಿ ತುಂಬಿದೆ ಎಂದು ತಿಳಿಸಿದರು.
ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿ ಗುರು ಸ್ಥಾನ ಎಂಬುದು ಮಾತೆಯ ಮಡಿಲಿಗೆ ಸಮನಾಗಿದೆ. ಗುರು ಸೇವೆಯಿಂದ ಸಮಾಜದ ಋಣ ತೀರಿಸುವ ಕಾರ್ಯವಾಗುತ್ತದೆ. ಆತ್ಮಸಾಕ್ಷಾತ್ಕಾರದ ಮೂಲಕ ಜೀವನ ಸಾರ್ಥಕತೆಯನ್ನು ಕಾಣಬೇಕು. ಪ್ರೀತಿ ಅಭಿಮಾನ ತುಂಬಿದ ಸಹಕಾರದಿಂದ ಕಾರ್ಯಕ್ರಮ ಯಶಸ್ಸಾಗಿದೆ. ಸಮಿತಿಯವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದು ತಿಳಿಸಿದರು.
ಒಡಿಯೂರು ಶ್ರೀ ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ. ಸುರೇಶ್ ರೈ, ಶ್ರೀ ಒಡಿಯೂರು ರಥೋತ್ಸವ ಸಮಿತಿ ಉಪಾಧ್ಯಕ್ಷರಾದ ಗೋಪಿನಾಥ ಶೆಟ್ಟಿ ಪುತ್ತೂರು, ಕೆ. ಎನ್. ವೆಂಕಟರಮಣ ಹೊಳ್ಳ ಕಾಸರಗೋಡು, ಕಾರ್ಯದರ್ಶಿಗಳಾದ ಕೃಷ್ಣ ಶೆಟ್ಟಿ ತಾರೆಮಾರ್, ಹರಿಣಾಕ್ಷಿ ಎಸ್. ಶೆಟ್ಟಿ ಜಮ್ಮದಮನೆ,
ತುಳು ಸಾಹಿತ್ಯ ಸಮ್ಮೇಳನೊ ಸಮಿತಿಯ ಪ್ರಧಾನ ಸಂಚಾಲಕ ಡಾ. ವಸಂತಕುಮಾರ ಪೆರ್ಲ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಭಂಡಾರಿ ವಂದಿಸಿದರು.