ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅ.10ರಂದು ರವಿವಾರ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ ಹಾಗೂ ಶ್ರೀ ಚಂಡಿಕಾ ಯಾಗವು ಜರಗಲಿರುವುದು.
ಈ ಸುಸಂದರ್ಭ ಬೆಳಿಗ್ಗೆ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ, ಬಳಿಕ ಶ್ರೀ ಚಂಡಿಕಾ ಯಾಗ ಆರಂಭಗೊಳ್ಳಲಿದೆ. ಬೆಳಿಗ್ಗೆ ಗಂಟೆ 11ಕ್ಕೆ ಪೂಜ್ಯ ಶ್ರೀಗಳವರು ಧರ್ಮಸಂದೇಶ ನೀಡಲಿದ್ದಾರೆ. ಮಧ್ಯಾಹ್ನ ಗಂಟೆ 12ರಿಂದ ಯಾಗದ ಪೂರ್ಣಾಹುತಿ, ಶ್ರೀ ವಜ್ರಮಾತೆಗೆ ಕಲ್ಪೋಕ್ತ ಪೂಜೆ, ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ಣ ಗಂಟೆ 2.30ರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.), ಮಂಗಳೂರು ಅರ್ಪಿಸುವ ’ಶ್ರೀರಾಮದರ್ಶನ’ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಖ್ಯಾತ ಯಕ್ಷಗಾನ ಕಲಾವಿದರುಗಳಾದ ಪಟ್ಲ ಸತೀಶ್ ಶೆಟ್ಟಿ, ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ ಶೆಟ್ಟಿ ವಗೆನಾಡು, ರಾಜೇಂದ್ರ ಕೃಷ್ಣ ಹಿಮ್ಮೇಳದಲ್ಲಿಯೂ, ಡಾ. ಎಂ. ಪ್ರಭಾಕರ ಜೋಷಿ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಮಾಧವ ಬಂಗೇರ ಕೊಲ್ತಮಜಲು ಅರ್ಥದಾರಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ಸಾಮೂಹಿಕ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ರಂಗಪೂಜೆ ಹಾಗೂ ಭದ್ರಕಾಳಿಗೆ ವಿಶೇಷ ಪೂಜೆ ನಡೆಸಯಲಿರುವುದು.


