ವಿಟ್ಲ: ಉತ್ತಮ ವ್ಯಕ್ತಿತ್ವ ಹೊಂದಿದ್ದವರಿಂದ ಸಾಮಾಜಿಕ ಸೇವಾ ಕಾರ್ಯ ಸಾಧ್ಯ. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಲು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳು ಪೂರಕವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರಲ್ಲಿಯೂ ಸಹಿಷ್ಣುತಾ ಭಾವನೆ, ಭ್ರಾತೃತ್ವ ಬೆಳೆಯಲು ಎನ್ಎಸ್ಎಸ್ ಮಾರ್ಗದರ್ಶನ ನೀಡುತ್ತದೆ. ವಿಶ್ವ ಮಾನವತೆಯ ಮನೋಭಾವನೆಯೊಂದಿಗೆ ಬದುಕು ಕಟ್ಟಲು ಇಂತಹ ಶಿಬಿರಗಳಲ್ಲಿ ಭಾಗವಹಿಸಬೇಕೆಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಧುಸೂದನ್ ಎನ್. ತಿಳಿಸಿದರು.
ಅವರು ಶುಕ್ರವಾರ ಕೇಪು ಖಂಡಿಗ ಕೈಲಾಸೇಶ್ವರ ಶಿವ ಕ್ಷೇತ್ರದಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಡಿ.22ರಿಂದ ನಡೆಯುತ್ತಿದ್ದ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಿಬಿರ ಸಂಯೋಜಕ ಶಿವಕ್ಷೇತ್ರದ ಆಡಳಿತ ಮೊಕ್ತೇಸರ ರವೀಶ್ ಕೆ.ಎನ್. ಮಾತನಾಡಿ ವಿದ್ಯಾರ್ಥಿಗಳಲ್ಲಿ ಉತ್ತಮ ವಿಚಾರಗಳಿರಬೇಕು. ಮೂಲನಂಬಿಕೆಗಳನ್ನು ಘಾಸಿಗೊಳಿಸುವ ವಿಚಾರವಾದಗಳಿಂದ ವಿವಾದಗಳು ಸೃಷ್ಟಿಯಾಗುತ್ತದೆ. ದೇವರ ನಂಬಿಕೆ, ಧ್ಯಾನ, ಜಪತಪ ಇವುಗಳು ಕೇವಲ ಧಾರ್ಮಿಕ ವಿಚಾರಗಳಲ್ಲ, ಇವುಗಳೊಳಗೆ ವಿಜ್ಞಾನವೂ ಹುದುಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕಾಂತೇಶ್ ಎಸ್. ವಹಿಸಿದ್ದರು. ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ, ನಿವೃತ್ತ ಶಿಕ್ಷಕ ಸತ್ಯನಾರಾಯಣ ಭಟ್, ಕೇಪು ಗ್ರಾಮ ಪಂಚಾಯಿತಿಯ ಸುರೇಶ್ ನಾಯ್ಕ, ಉದ್ಯಮಿ ಯು.ವಿ.ಜಯರಾಮ, ನೀರ್ಕಜೆ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಕೆ.ಜಯಂತಿ, ವಿಟ್ಲ ಜಮಾತೆ ಇಸ್ಮಾಯಿಲ್ ಹಿಂದದ ಅಧ್ಯಕ್ಷ ಹೈದರ್ ಅಲಿ, ಕರೋಪಾಡಿ ಗ್ರಾ. ಪಂ. ಸದಸ್ಯ ದಿನೇಶ್ ಶೆಟ್ಟಿ ಪಟ್ಲ ಭಾಗವಹಿಸಿದ್ದರು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾರಣ್ಣ ಕೆ ಸ್ವಾಗತಿಸಿದರು. ಗಣಕ ವಿಜ್ಞಾನ ಸಹಾಯಕ ಪ್ರಾಧ್ಯಾಪಿಕೆ ರಶ್ಮಿ ಜೆ.ಆರ್ ವಂದಿಸಿದರು. ಶಿಬಿರಾಧಿಕಾರಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮುರಳಿ ಕೂಡ್ಲೂರು ಕಾರ್ಯಕ್ರಮ ನಿರೂಪಿಸಿದರು.

