ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಪುಲೊಕ್ಕು ಪರಿಸರದಲ್ಲಿ ಹಾಗೂ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಚಿನಡ್ಕದಲ್ಲಿ ಬೃಹತ್ ಆಕಾರದ ತೋಡು ಇದ್ದು ಈ ಪರಿಸರದಲ್ಲಿ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿ ಈ ತೋಡು ಹಾದು ಹೋಗುತ್ತದೆ. ಈ ತೋಡುವಿಗೆ ಸುಮಾರು 25 ವರ್ಷಗಳ ಹಿಂದೆ ಕುಕ್ಕೇಡಿ ಗ್ರಾಮ ಮತ್ತು ಪಿಲತ್ತಬೆಟ್ಟು – ನಯನಾಡು ಗ್ರಾಮದ ವ್ಯಾಪ್ತಿಯ ಬೆಂಚಿನಡ್ಕ ಎಂಬಲ್ಲಿ ಕಿರು ಕಿಂಡಿ ಅಣೆಕಟ್ಟು ನಿರ್ಮಿಸಿರುತ್ತಾರೆ. ಈ ಕಿಂಡಿ ಅಣೆಕಟ್ಟಿನಲ್ಲಿ ಪಾದಾಚಾರಿಗಳಿಗೆ ಮತ್ತು ದ್ವಿಚಕ್ರ ವಾಹನಕ್ಕೆ ಹೋಗಲು ಕಾಲುದಾರಿಯಂತೆ ನಿರ್ಮಾಣ ಮಾಡಿರುತ್ತಾರೆ. ಈ ಕಾಲುದಾರಿಯಲ್ಲಿ ಈ ಹಿಂದೆ 6 – 7 ಅವಘಡ ಸಂಬವಿಸಿದೆ. ಈ ನಮ್ಮ ಎರಡೂ ತಾಲೂಕಿನ ಎರಡೂ ಗ್ರಾಮದ ಇಕ್ಕೆಲದ ಮಧ್ಯಭಾಗದಲ್ಲಿ ಹೋಗಲು ಈ ದಾರಿಯನ್ನು ಅವಲಂಬಿಸಿರುತ್ತೇವೆ. ಮಳೆಗಾಲದಲ್ಲಿ ನೆರೆ ಬಂದಾಗ 10 ಕಿ.ಮೀ ಸುತ್ತಿ ಬರುವಂತಹ ಸ್ಥಿತಿ ಇಲ್ಲಿದ್ದು ನಮ್ಮ ಈ ಪರಿಸರದಲ್ಲಿ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ನಮ್ಮ ಈ ಪರಿಸರದ ಮನೆಗಳಿಗೆ ದ್ವಿಚಕ್ರ ವಾಹನ ಅಲ್ಲದೇ ದೊಡ್ಡ ವಾಹನ ಹೋಗಲು ಸೇತುವೆ ನಿರ್ಮಾಣದ ಅನಿವಾರ್ಯತೆಯಾಗಿದೆ ಅಲ್ಲದೆ ಈ ಪರಿಸರದಲ್ಲಿ 3 ಗ್ರಾಮದ ವ್ಯಾಪ್ತಿಯಲ್ಲಿ ಬರುತ್ತದೆ. ಅನಿರೀಕ್ಷಿತ ಸಂದರ್ಭದಲ್ಲಿ ಆಸ್ಪತ್ರೆ (ಚಿಕಿತ್ಸಾ ಸೌಲಭ್ಯ) ಪಡೆಯಲು ಈ ಕಿಂಡಿ ಅಣೆಕಟ್ಟಿನ ಕಾಲು ದಾರಿಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಮಗೆ ಒದಗಿ ಬಂದಿರುತ್ತದೆ. ದೊಡ್ಡ ವಾಹನವನ್ನು ಸಂಪರ್ಕಿಸಬೇಕಾದರೆ ಸುಮಾರು 5 ಕಿ.ಮೀ ನಡೆದು ಹೋಗಬೇಕಾಗಿರುತ್ತದೆ. ಆದ್ದರಿಂದ ನಮ್ಮ ಎರಡೂ ತಾಲೂಕಿನ 3 ಗ್ರಾಮಗಳ ಗಡಿಭಾಗದಲ್ಲಿ ಹರಿಯುವ ಬೃಹತ್ ತೋಡುವಿಗೆ ದೊಡ್ಡ ವಾಹನ ಹೋಗುವ ಸೇತುವೆಯನ್ನು ನಿರ್ಮಿಸುವುದು ಅನಿವಾರ್ಯವಾಗಿದೆ.


ಇದಕ್ಕೆ ಸ್ಪಂದಿಸಿದ ಎನ್.ಜಿ. ನಯನ್ ಚಾರಿಟೆಬಲ್ ಟ್ರಸ್ಟ್ ಹಾಗೂ ರಸ್ತೆ ಸಮಿತಿಯ ಸಹಕಾರದೊಂದಿಗೆ ಬ್ರಹತ್ ತೋಡಿಗೆ ಮಣ್ಣು ಹಾಕಿ ತಾತ್ಕಲಿಕ ರಸ್ತೆಯನ್ನು ನಿರ್ಮಾಣ ಮಾಡಿರುತ್ತಾರೆ. ಬಾನುವಾರ ಬೆಳಗ್ಗೆ ೯.೩೦ಗೆ ತಾತ್ಕಲಿಕ ರಸ್ತೆಯನ್ನು ಉದ್ಘಾಟಿಸಲಾಯಿತು. ಕುಕ್ಕೆಡಿ ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಪೂಜಾರಿ, ಟ್ರಸ್ಟ್ ಸ್ಥಾಪಕ ಅಧ್ಯಕ್ಷ ನೆಲ್ವಿಸ್ಟರ್ ಪಿಂಟೊ, ಸ್ಥಾಪಕ ಉಪಾದ್ಯಕ್ಷ ನವೀನ್ ಗಲ್ಭಾಂವೊ, ರಸ್ತೆ ಸಮಿತಿಯ ಅಧ್ಯಕ್ಷ ಡೆನಿಸ್ ಡಿಸೋಜ, ಕಾರ್ಯದರ್ಶಿ ನಾನ್ಯಪ್ಪ ಪೂಜಾರಿ ಹಾಗೂ ನಾಗರೀಕರು ಹಾಜರಿದ್ದರು.