ಬಂಟ್ವಾಳ: ಅತೀ ಪುರಾತನವೂ ಪ್ರಸಿದ್ಧವೂ ಆಕರ್ಷಣೀಯವು ಆದ ಶಿವಕ್ಷೇತ್ರ ಪಾಣೆಮಂಗಳೂರು ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನಕ್ಕೆ ಮಂಗಳೂರು ಪಶ್ಚಿಮ ವಲಯ ಐ.ಜಿ.ಪಿ. ಜೆ. ಅರುಣ್ ಚಕ್ರವರ್ತಿ ಅವರು ಭೇಟಿ ನೀಡಿ ಇಲ್ಲಿಯ ಅದ್ಭುತ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಿ ಅನಿರ್ವಚನೀಯ ಆನಂದವನ್ನು ಅನುಭವಿಸಿದರು.
ಪರ್ವತದ ತುದಿಯಲ್ಲಿ ಸದಾಶಿವನ ಸಾನಿಧ್ಯದಲ್ಲಿ ಸದಾ ನೀರು ಇರುವ ಶಂಖ, ಚಕ್ರ, ಗದಾ ಮತ್ತು ಪದ್ಮದ ಆಕಾರದ ಪ್ರಾಕೃತಿಕ ತೀರ್ಥ ಕೂಪಗಳನ್ನು ನೋಡಿ ಮೂಕವಿಸ್ಮಯರಾದರು. ನಿತ್ಯ ಹರಿಧ್ವರ್ಣದ ಸಸ್ಯ ಶಾಮಾಲೆಯ ಸೆರಗಿನಲ್ಲಿರುವ ಇಲ್ಲಿಯ ಪ್ರಶಾಂತತೆಯಿಂದ ಭಾವುಕರಾದರು.
ಆಡಳಿತ ಮೋಕ್ತೆಸರ ಡಾ. ಪ್ರಶಾಂತ ಮಾರ್ಲರು ನರಹರಿ ಪರ್ವತ ಸದಾಶಿವ ದೇವಸ್ಥಾನ ಸುಮಾರು 8 ಕೋಟಿ ವೆಚ್ಚ ದಲ್ಲಿ ಪುನರ್ ನಿರ್ಮಾಣ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.


ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ ಅವರು ಐ.ಜಿ.ಪಿ ಅವರನ್ನು ಸ್ವಾಗತಿಸಿ, ಗೌರವಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ ಅವರು ಶಿವನಿಗೆ ವಿಶೇಷ ಪೂಜೆ ಮಾಡಿ, ಪ್ರಸಾದವನ್ನು ಐ.ಜಿ.ಪಿ ಅವರಿಗೆ ನೀಡಿದರು. ತಾವು ಕುಟುಂಬ ಸಮೇತರಾಗಿ ಮತ್ತೊಮ್ಮೆ ನರಹರಿ ಪರ್ವತಕ್ಕೆ ಆಗಮಿಸುವುದಾಗಿ ಐ.ಜಿ.ಪಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೋಕ್ತೆಸರುಗಳಾದ ಸುಂದರ ಬಂಗೇರ, ಪ್ರತಿಭಾ.ಎ.ರೈ, ಮಾಧವ ಶೆಣೈ, ಎಂ.ಎನ್.ಕುಮಾರ್, ಜೀರ್ಣೊದ್ಧಾರ ಸಂಘಟನಾ ಕಾರ್ಯದರ್ಶಿ ಶಂಕರ ಆಚಾರ್ಯ, ಮ್ಯಾನೇಜರ್ ಆನಂದ್, ಶಿವನಂದಾ ಬೊಂಡಾಲ್, ದಿನೇಶ್, ಮೋಹನ್ ಮುಂತಾದವರು ಉಪಸ್ಥಿತರಿದ್ದರು.