ಬಂಟ್ವಾಳ: ತಾಲೂಕಿನ ಪುರಾತನ ಪ್ರಸಿದ್ದವಾದ ಮೆಲ್ಕಾರ್ ಸಮೀಪದ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದಿಂದ 3 ಕೋ.ರೂ.ಬಿಡುಗಡೆ ಮಾಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದೆ. ವ್ಯವಸ್ಥಾಪನಾ ಸಮಿತಿ ಸದಸ್ಯ ಎಂ.ಎನ್.ಕುಮಾರ್ ಅವರ ನೇತೃತ್ವದ ನಿಯೋಗ ಮಂಗಳವಾರ ಶ್ರೀಕ್ಷೇತ್ರ ನಂದಾವರಕ್ಕಾಗಮಿಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿ ಅನುದಾನ ಬಿಡುಗಡೆಗೆ ಒತ್ರಾಯಿಸಿದ್ದಾರೆ. ಮಂಗಳೂರು-ಬೆಂಗಳೂರು ರಾ.ಹೆ.ಯಲ್ಲಿ ಪಾಣೆಮಂಗಳೂರು-ಅಮ್ಟೂರು-ಗೋಳ್ತಮಜಲು ಗ್ರಾಮಗಳ ತ್ರಿವೇಣಿ ಸಂಗಮದ ಗಡಿಪ್ರದೇಶದಲ್ಲಿ ಸಮುದ್ರಮಟ್ಟದಿಂದ ಸುಮಾರು 1000 ಆಡಿ ಎತ್ತರದ ಪ್ರಕೃತಿ ಸೌಂದರ್ಯದ ರಮಣೀಯವಾದ ಪರ್ವತ ತುದಿಯಲ್ಲಿರುವ ಶಿವಕ್ಷೇತ್ರವಾದ ನರಹರಿ ಪರ್ವತ ಶ್ತೀ ಸದಾಶಿವ ದೇವಸ್ಥಾನದ ಪುನರ್ ನಿರ್ಮಾಣಕಾರ್ಯಕ್ಕೆ ಈಗಾಗಲೇ 6 ಕೋ.ರೂ.ವೆಚ್ಚದ ಅಂದಾಜುಪಟ್ಟಿ ಸಿದ್ದಪಡಿಸಿ ಪ್ರಥಮ ಹಂತವಾಗಿ ಮೂರು ಗ್ರಾಮಗಳ ಭಕ್ತರ ಪರವೂರ ದಾನಿಗಳ ಸಹಕಾರದಿಂದ ಒಂದಷ್ಟು ಕಾಮಗಾರಿಯನ್ನು ನಡೆಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಅನುದಾನದ ಅವಶ್ಯಕತೆ ಇದ್ದು,ಪ್ರಸ್ತಾವಿತ ಮೂರು ಕೋ.ರೂ.ಅನುದಾನವನ್ನು ಸರಕಾರದಿಂದ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೃಷ್ಣನಾಯಕ್, ಜೀರ್ಣೋದ್ದಾರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಂಕರ ಆಚಾರ್ಯ, ವಿಠಲ ಆಚಾರ್ಯ ಮೊದಲಾದವರಿದ್ದರು.


