ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪಮೂಡ ಗ್ರಾಮದ ನಗ್ರಿ ಶಾಂತಿನಗರದಲ್ಲಿ ತಸ್ಲೀಮ್ ಯಾನೆ ಮುತಾಸಿಮ್ನ ಮೃತದೇಹವು ಪತ್ತೆಯಾಗಿದ್ದು, ಇದೊಂದು ಸಂಚಿತ ಕೊಲೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದ್ದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.


ಈ ಪ್ರಕರಣದ ತನಿಖಾ ಕಾರ್ಯವನ್ನು ಗುಲ್ಬಾರ್ಗಾ ಪೊಲೀಸರೇ ನಡೆಸುತ್ತಿದ್ದು, ಇನ್ನು ಕೆಲವರ ಹೆಸರು ಪೋಲೀಸರ ವಶದಲ್ಲಿರುವ ವ್ಯಕ್ತಿಗಳ ಮೂಲಕ ಪೋಲೀಸರಿಗೆ ಲಭ್ಯವಾಗಿದ್ದು, ಅವರ ಬಂಧನಕ್ಕೆ ಪೋಲೀಸರು ಕಾರ್ಯಚರಣೆ ಆರಂಭಿಸಿದ್ದಾರೆ.
ತಸ್ಲೀಮ್ ಕೊಲೆ ಆರೋಪಿಯಲ್ಲದೆ, ಮಂಗಳೂರು ಅರುಣಾ ಜ್ಯುವೆಲ್ಲರಿ ರಾಬರಿಯಲ್ಲಿ ಆರೋಪಿಯಾಗಿದ್ದ.
ಪ್ರಸ್ತುತ ತಸ್ಲೀಮ್ ಗುಲ್ಬರ್ಗಾ ಜಿಲ್ಲೆಯಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಆತನನ್ನು ವಿರೋಧಿ ಗ್ಯಾಂಗ್ ಅಪಹರಣ ನಡೆಸಿತ್ತು. ಇದಕ್ಕೆ ಸಂಬಂಧಿಸಿ ಜ.31ರಂದು ಜೇವರ್ಗಿ ಪೊಲೀಸ್ ಸರ್ಕಲ್ ವ್ಯಾಪ್ತಿಯ ನೇಲೊಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ ಇದೇ ವಿಚಾರದಲ್ಲಿ ಅಲ್ಲಿನ ಪೊಲೀಸರು ಕೆಲವರನ್ನು ವಶಕ್ಕೆ ಕೂಡ ಪಡೆದಿತ್ತು. ಅಪಹರಣ ನಡೆಸಿದ ತಂಡವನ್ನು ಅಲ್ಲಿನ ತನಿಖಾಧಿಕಾರಿ ಬೆನ್ನಟ್ಟಿ ಬರುತ್ತಿದ್ದು, ಅದಗಲೇ ಈತನ ಕೊಲೆ ನಡೆದುಹೋಗಿತ್ತು. ಹೀಗಾಗಿ ಕೊಲೆ ಪ್ರಕರಣದ ತನಿಖೆಯನ್ನೂ ಗುಲ್ಬರ್ಗಾ ಪೋಲೀಸರೇ ನಡೆಸುತ್ತಿದ್ದಾರೆ.
ತಸ್ಲೀಮ್ ನನ್ನು ಕಾರಿನಲ್ಲಿಯೇ ಕುತ್ತಿಗೆಗೆ ಹಗ್ಗ ಕಟ್ಟಿ ಬಳಿಕ ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿಗಳು ಮೃತದೇಹವನ್ನು ನಗ್ರಿ ಶಾಂತಿನಗರದಲ್ಲಿ ಬಿಟ್ಟು ಪರಾರಿಯಾಗಿರುವುದರಿಂದ, ಈ ತನಿಖೆ ನಡೆಸುವ ಗುಲ್ಬಾರ್ಗಾ ಇನ್ಸ್ ಪೆಕ್ಟರ್ ನೇತ್ರತ್ವದ ತಂಡಕ್ಕೆ ಬಂಟ್ವಾಳ ಇನ್ಸ್ ಪೆಕ್ಟರ್ ನೇತ್ರತ್ವದ ತಂಡ, ಮಂಗಳೂರು ನಗರದ ಪೋಲೀಸರು, ಸಿ.ಸಿ.ಬಿ, ಡಿ.ಸಿ.ಐ.ಬಿ ನೇತ್ರತ್ವದ ಪೋಲೀಸ್ ತಂಡಗಳು ಇವರಿಗೆ ಸಾಥ್ ನೀಡುತ್ತಿದೆ.
ಈಗಾಗಲೇ ಗುಲ್ಬರ್ಗಾ ಪೋಲೀಸರು ತಸ್ಲೀಮ್ ಮೃತದೇಹ ಪತ್ತೆಯಾದ ಇನೋವಾ ಕಾರನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸುತ್ತಿದ್ದು, ಆರೋಪಿಗಳ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.