(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಾಯಿ, ಜೂ.೧೫: ಸಮಭಾವ, ಸಮಾನತೆಯ ಬದುಕಿಗೆ ಮುಂಬಯಿ ಜನಜೀವನ ಆದರ್ಶವಾಗಿದ್ದು, ದೇವಾನುಗ್ರಹವೇ ಸಾಮರಸ್ಯ ಬಾಳಿನ ಸಂದೇಶವಾಗಿದೆ ಎಂದು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಜಿಎಸ್ಬಿ ಸಭಾ ನವಿ ಮುಂಬಯಿ ಇದರ ನವಿ ಮುಂಬಯಿ ವಾಶಿ ಇಲ್ಲಿನ ಬಾಲಾಜಿ ಮಂದಿರ ಪ್ರಸಿದ್ಧಿಯ ಶ್ರೀ ಲಕ್ಷಿ ವೆಂಕಟರಮಣ ದೇವಸ್ಥಾನದಲ್ಲಿ ಜೇಷ್ಠ ಶುಕ್ಲ ತ್ರಯೋದಶಿ ದಿನವಾದ ಇಂದು ಶನಿವಾರ ಮಂದಿರದಲ್ಲಿ ರಜತ ಸಂಭ್ರಮಕ್ಕೆ ಚಾಲನೆಯನ್ನೀಡಲಾಗಿದ್ದು ಪಟ್ಟದ ದೇವರಿಗೆ ಪೂಜೆ ನೆರವೇರಿಸಿ ಮಹಾರತಿಗೈದು ನೆರೆದ ಸದ್ಭಕ್ತರಿಗೆ ಮಂತ್ರಾಕ್ಷತೆ ನೀಡಿ ಸಂಯಮೀಂದ್ರಶ್ರೀಗಳು ಅನುಗ್ರಹಿಸಿದರು.
ರಜತ ಸಂಭ್ರಮ ನಿಮಿತ್ತ ಮಂದಿರದಲ್ಲಿ ಬೆಳಿಗ್ಗೆಯಿಂದ ದೇವತಾ ಪ್ರಾರ್ಥನೆ, ಗುರು ಪೂಜೆ, ಗಣಪತಿ ಪೂಜೆ, ಪುಣ್ಯಾಹ ವಾಚನ ಪೂಜೆ, ಗೌರಿ ಮಾತ್ರಕ ಪೂಜೆ, ದೇವನಂದಿನಿ ಸಮಾರಾಧನಾ, ಋತ್ವಿಜವಾರಣ. ವೆಂಕಟೇಶ ಮೂಲ ಮಂತ್ರ ಜಪ, ಪರಿವಾರ ದೇವತಾ ಮೂಲಮಂತ್ರ ಜಪ, ಪವಮಾನ ಪಾರಾಯಣ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಬ್ರಾಹ್ಮಣ ಸಂತರ್ಪಣೆ. ಸಂಜೆ ಬಾಲಾಜಿ ದೇವರಿಗೆ ರಂಗ ಪೂಜೆ, ಭಜನಾ ಸೇವಾ, ರಾತ್ರಿ ಪೂಜೆ ಮತ್ತು ಪ್ರಸಾದ ವಿತರಣೆ ನಡೆಸಲ್ಪಟ್ಟಿತು.
ಸಮಾಜದ ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ಗುರುಪೂಜೆಗೈದ ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಶತಾನಂದ ಭಟ್ (ಹರೀಶ್ ಭಟ್) ಮಹಾಪೂಜೆಯನ್ನು ಹಾಗೂ ವೇದಮೂರ್ತಿ ಲಕ್ಷಿ ನಾರಾಯಣ ಭಟ್ ವಾಲ್ಕೇಶ್ವರ್) ಮತ್ತು ಪುರೋಹಿತರಾದ ಕೇದಾರ್ ಭಟ್ ಸಂಗಡಿಗರು ವಿವಿಧ ಪೂಜಾಧಿಗಳನ್ನು ವಿವಿಧ ಪೂಜಾಧಿಗಳನ್ನು ನಡೆಸಿ ನೆರೆದ ಭಕ್ತಾಭಿಮಾನಿಗಳನ್ನು ಆಶೀರ್ವದಿಸಿದರು. ರಾಜೀವ್ ವಾದಿಯಾರ್ ಮತ್ತು ಮನೋಜ್ ಪ್ರಭು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಎಸ್ಬಿ ಸಭಾ ನವಿ ಮುಂಬಯಿ ಅಧ್ಯಕ್ಷ ಎಸ್.ಆರ್ ಪೈ, ಕಾರ್ಯಾಧ್ಯಕ್ಷ ದೀಪಕ್ ಬಿ.ಶೆಣೈ, ಗೌರವ ಕಾರ್ಯದರ್ಶಿ ವಸಂತ್ ಕುಮಾರ್ ಬಂಟ್ವಾಳ, ಕೋಶಾಧಿಕಾರಿ ಪ್ರೇಮಾನಂದ ಮಲ್ಯ, ಜೊತೆ ಕಾರ್ಯದರ್ಶಿ ಸತೀಶ್ ಶೆಣೈ, ಜೊತೆ ಕೋಶಾಧಿಕಾರಿ ಪ್ರಮೋದ್ ಎಸ್.ಕಾಮತ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೀಮಾ ಎಸ್.ಪೈ, ಕಾರ್ಯದರ್ಶಿ ಗಿರಿಜಾ ಭಂಡಾರಿ, ಕಟಪಾಡಿ ಉಮೇಶ್ ಕಿಣಿ, ಬೈದ್ಯೆಬೆಟ್ಟು ಆನಂದರಾಯ ಪೈ, ಶ್ರೀನಿವಾಸ ವಿ.ಶೆಣೈ, ವೆಂಕಟೇಶ ವಿ.ಪ್ರಭು, ವಿ.ಪ್ರಭಾಕರ ಪೈ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರನೇಕರು, ಜಿಎಸ್ಬಿ ಸಮಾಜ ಬಾಂಧವರು, ಅಪಾರ ಸಂಖ್ಯೆಯ ಭಕ್ತವೃಂದ ಉಪಸ್ಥಿತರಿದ್ದು ಪೂಜಾಧಿಗಳಲ್ಲಿ ಪಾಲ್ಗೊಂಡರು.
ಇಂದು (ಜೂ.೧೬) ಭಾನುವಾರ, ಜೇಷ್ಠ ಶುಕ್ಲ ಚತುದರ್ಶಿ ಶುಭಾವಸರದಲ್ಲಿ ಮಂದಿರದ ಪ್ರತಿಷ್ಠಾಪಿತ ಪರಿವಾರ ದೇವತೆಗಳ ೨೨ನೇ ವರ್ಧಂತಿ ಮಹೋತ್ಸವ ಆಚರಿಸಲಿದ್ದು, ಬೆಳಿಗ್ಗೆಯಿಂದ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗುರು ಮತ್ತು ಗಣಪತಿ ಪೂಜೆ, ಗೌರಿ ಮಾತ್ರಕ ಪೂಜೆ, ದೇವನಂದಿನಿ ಸಮಾರಾಧನಾ. ಕಲಶ ಪ್ರಾರ್ಥನೆ, ಅಭಿಷೇಕ, ಲಕ್ಷಿ ನಾರಾಯಣ ಹೃದಯ ಪರಾಯಣ ಹವನ, ವೆಂಕಟೇಶ ಮೂಲ ಮಂತ್ರ ಹವನ. ಮಧ್ಯಾಹ್ನ ಪುಣ್ಯಾಹುತಿ, ಪ್ರಸನ್ನ ಪೂಜೆ, ಅಷ್ಠ ಮಂಗಳ ನಿರೀಕ್ಷಣ, ಪರಿವಾರ ದೇವತರಿಗೆ ಪಟ್ಟ ಕಾಣಿಕೆ, ಮಧ್ಯಾಹ್ನದ ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ, ಪ್ರಸಾದ ವಿತರಣೆ. ಸಂಜೆ ಭಜನಾ ಸೇವಾ, ಬಾಲಾಜಿ ದೇವರಿಗೆ ಮತ್ತು ಪರಿವಾರ ದೇವತರಿಗೆ ರಂಗ ಪೂಜೆ, ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಅಂತೆಯೇ ಸೋಮವಾರ (ಜೂ.೧೭) ಜೇಷ್ಠ ಶುಕ್ಲ ಪೂರ್ಣಿಮೆಯಂದು ಶ್ರೀ ಬಾಲಾಜಿ ಪ್ರತಿಷ್ಠ್ಠಾ ವರ್ಧಂತಿ ಮತ್ತು ದೇವತೆಗಳ ೧೮ನೇ ನವಗ್ರಹ ದೇವತಾ ವರ್ಧಂತಿ ಮಹೋತ್ಸವ ನಿಮಿತ್ತ ಬೆಳಿಗ್ಗೆಯಿಂದ ರಾತ್ರಿ ತನಕ ವಿವಿಧ ಪೂಜಾ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಆ ಪ್ರಯುಕ್ತ ನಡೆಸಲ್ಪಡುವ ಈ ರಜತ ಸಡಗರದಲ್ಲಿ ಸಭಾ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಶ್ರೀ ಹರಿಯ ಕೃಪೆಗೆ ಪಾತ್ರರಾಗುವಂತೆ ಜಿಎಸ್ಬಿ ಸಭಾ ನವಿ ಮುಂಬಯಿ ಸಮಿತಿ ತಿಳಿಸಿದೆ.