ಮಂಗಳೂರು ಮೂಡ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ವಿಲೇವಾರಿಯಾಗುತ್ತಿಲ್ಲ ಹಾಗೂ ಕಛೇರಿಯಲ್ಲಿ ಮಧ್ಯವರ್ತಿಗಳದ್ದೇ ದರ್ಬಾರು ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಮೂಡ ಕಚೇರಿಗೆ ದಿನಾಂಕ 13.03.2024 ರಂದು ಸಂಜೆ ಅನಿರೀಕ್ಷಿತ ಭೇಟಿ ನೀಡಿ ರಾತ್ರಿ ಸುಮಾರು 18 ಗಂಟೆಗಳ ದೀರ್ಘಕಾಲ ಪರಿಶೀಲನೆ ನಡೆಸಿದ್ದು, ಪರಿಶೀಲನೆ ನಡೆಸಿದಾಗ ಕಛೇರಿಯ ಅಧಿಕಾರಿಗಳಲ್ಲಿ ಮತ್ತು ಹಲವಾರು ವ್ಯಕ್ತಿಗಳಲ್ಲಿ ದೊಡ್ಡ ಪ್ರಮಾಣದ ಹಣವಿದ್ದು, ಸೂಕ್ತ ಉತ್ತರ ಸಿಕ್ಕಿರುವುದಿಲ್ಲ, ಕಛೇರಿಯಲ್ಲಿ ಹಣದ ಬ್ಯಾಗ್ ಪತ್ತೆಯಾಗಿರುವುದಾಗಿರುತ್ತದೆ.

ಪರಿಶೀಲನೆ ನಡೆಸುತ್ತಿರುವ ವೇಳೆ ಹಲವು ಸಾರ್ವಜನಿಕರು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಹಾಗೂ ಕಚೇರಿಯಲ್ಲಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಕುರಿತು ಹೇಳಿಕೊಂಡಿರುತ್ತಾರೆ. ಪರಿಶೀಲನೆ ಸಂದರ್ಭ ದೀರ್ಘಕಾಲದಿಂದ ವಿಲೇವಾರಿಯಾಗದ ಹಲವಾರು ಅರ್ಜಿದಾರರ ಕಡತಗಳು ಸಿಕ್ಕಿರುತ್ತದೆ. ಅಧಿಕಾರಿಗಳು ಬ್ರೋಕರ್ ಗಳೊಡನೆ ಫೋನ್ ಮುಖಾಂತರ ಹೊಂದಾಣಿಕೆ ಮಾಡಿಕೊಂಡು ಕಡತ ವಿಲೇವಾರಿ ಮಾಡುತ್ತಿರುವುದಾಗಿ ಸಾಕ್ಷಿ ದೊರೆತಿರುತ್ತದೆ. ಈ ಹಿನ್ನಲೆಯಲ್ಲಿ ಮೂಡ ಕಛೇರಿ ಜಾಲದ ಬಗ್ಗೆ ತನಿಖೆ ಮುಂದುವರೆದಿರುತ್ತದೆ.
ಸಿ.ಎ. ಸೈಮನ್, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಲುವರಾಜು, ಬಿ, ಡಾ|| ಗಾನ ಪಿ ಕುಮಾರ್, ಹಾಗೂ ಪೊಲೀಸ್ ನಿರೀಕ್ಷಕರಾದ ಶ್ರೀ ಅಮಾನುಲ್ಲಾ.ಎ, ಶ್ರೀ ಸುರೇಶ್ ಕುಮಾರ್.ಪಿ ಇವರು ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ಕೈಗೊಂಡಿರುತ್ತಾರೆ.