ಬಂಟ್ವಾಳ: ಸಾಂಕ್ರಾಮಿಕ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸ್ವಚ್ಛತೆಗೆ ಹೆಚ್ಷಿನ ಆದ್ಯತೆ ನೀಡುವಂತೆ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಹೇಳಿದರು.
ಅವರು ತಾ.ಪಂ.ನ.ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಮಾಸಿಕ ಸಭೆಯಲ್ಲಿ ಹೇಳಿದರು.
ರೋಗಗಳು ಬಂದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ರೋಗ ಬರುವ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಲ್ಲಿ ತಿಳಿಸಿದರು.

ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಗೆ ಒರ್ವ ಬಲಿಯಾದ ಬಗ್ಗೆ ಮಾಹಿತಿಯನ್ನು ವೈದ್ಯಾಧಿಕಾರಿಗಳ ಬಳಿ ಕೇಳಿದಾಗ ಅದು ಡೆಂಗ್ಯೂ ಜ್ವರ ಎಂಬ ಬಗ್ಗೆ ಇನ್ನೂ ಕೂಡಾ ಖಚಿತವಾದ ವರದಿ ಬಂದಿಲ್ಲ.
ಅವರ ರಕ್ತದ ಸರಿಯಾದ ವರದಿ ಬಂದ ಬಳಿಕವೇ ಹೇಳಬಹುದು ಎಂದು ತಿಳಿಸಿದರು. ಡೆಂಗ್ಯೂ ರೋಗದ ಬಗ್ಗೆ ಜನ ಸಾಮಾನ್ಯರಿಗೆ ಹಾಗೂ ಶಾಲಾ ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡುವಂತೆ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಹಾಗೂ ತೋಟಗಾರಿಕೆ ಇಲಾಖೆಯ ಸಸಿಗಳನ್ನು ಶೀಘ್ರವಾಗಿ ಕೃಷಿಕರಿಗೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇಲಾಖಾ ವರದಿಗಳು ತಿಂಗಳ 2 ನೇ ತಾರೀಖಿನಂದು ಬರಲೇ ಬೇಕು ಎಂದು ತಾ.ಪಂ.ಇ.ಒ.ರಾಜಣ್ಣ ಅಧಿಕಾರಿ ಗಳಿಗೆ ಸೂಚಿಸಿದರು.
ಪ್ರತಿ ಮೀಟಿಂಗ್ ಗಳಲ್ಲಿ ವರದಿ ಸರಿಯಾದ ಸಮಯಕ್ಕೆ ಬರದೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.