ಕಲ್ಲಡ್ಕ: ವ್ಯಕ್ತಿ ಪ್ರತಿಷ್ಠೆಗಿಂತ ದೇಶವೇ ದೊಡ್ಡದು ವ್ಯಕ್ತಿಯೊಬ್ಬ ಯಾವ ಮಟ್ಟಕ್ಕೆ ಏರಿದರೂ ಕೂಡಾ ದೇಶದ ಮುಂದೆ ಎಲ್ಲರೂ ಸಮಾನರು. ತಾನು ಇರುವ ಹುದ್ದೆಯ ಜವಾಬ್ದಾರಿ ಅರಿತು ವ್ಯವಹರಿಸಿದರೆ ಆತ ಶ್ರೇಷ್ಟನಾದನು ಎಂದು ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಹೇಳಿದರು. ಅವರು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.


ಶಿಶುಮಂದಿರದ ಚಟುವಟಿಕೆಗಳನ್ನು ವೀಕ್ಷಿಸಿದ ಅವರು ಇಲ್ಲಿ ಜೀವನಕೌಶಲ್ಯದ ಶಿಕ್ಷಣವನ್ನು, ಸಂಸ್ಕಾರ ಹಾಗೂ ಭಾರತೀಯ ನೆಲೆಗಟ್ಟಿನ ಆಧಾರದಲ್ಲಿ ನೀಡಲಾಗುತ್ತಿದೆ. ಸಂಸ್ಕೃತದ ವ್ಯವಹಾರ ಉತ್ತರ ಭಾಗಕ್ಕಿಂತ ಹೆಚ್ಚು ಬಳಕೆಯಲ್ಲಿದೆ ಎಂದರು. ದಕ್ಷಿಣ ಭಾರತ ಜನರ ಬಗ್ಗೆ ನನಗಿದ್ದ ಭಾವನೆ ನನಗೀಗ ಬದಲಾಗಿದೆ. ಇಲ್ಲಿನ ಜನ ಪ್ರೇಮಪೂರ್ಣ, ಸೌಹಾರ್ದಯುತ, ಭಾವನಾ ಜೀವಿಗಳಾಗಿರುವುದು ನನ್ನಅರಿವಿಗೆ ಬಂದಿದೆ. ನರೇಂದ್ರ ಮೋದಿಯವರದ್ದು ಸಮಾಜ ಸಮರ್ಪಕ ಬದುಕು, ದೇಶದ ಬಗೆಗಿನ ಅವರ ಕಾಳಜಿ ದೊಡ್ಡದು. ಬಾಲ್ಯದಿಂದಲೂ ಪ್ರತಿಯೊಂದುಕಾಲದಲ್ಲೂ ಶಿಶ್ತುಬದ್ಧ ಜೀವನ ನಡೆಸಿದರು. ನಮಗ್ಯಾರಿಗೂಅವರ ಹುದ್ದೆಯ ನಡುವೆ ನಾವೂ ಗುರುತಿಸಿಕೊಳ್ಳುವಂತಾಗಬೇಕು ಎಂದು ಅನಿಸಲೇ ಇಲ್ಲ. ಆದರೆ ಸಮಾಜ ನಮ್ಮನ್ನು ವಿಶೇಷ ಆದರದಿಂದ ಕಾಣುತ್ತಿರುವುದರ ಬಗ್ಗೆ ಸಂತೋಷವಿದೆ. ಆದರೆ ಎಲ್ಲೂ ನಮ್ಮ ಕುಟುಂಬವು ಅವರ ಜವಾಬ್ದಾರಿ ನಿರ್ವಹಣೆಗೆ ತೊಡಕಾಗದಂತೆ ಎಚ್ಚರವಹಿಸಿದೆ. ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಅವರೊಂದಿಗೆ ಕುಟುಂಬದ ಜ್ಯೋತಿಷ್ಯರಾದ ಶಿವಗಿರಿ ಮಹಾರಾಜ್, ತೆಲಂಗಾಣ ಸಂಸ್ಕೃತ ಶಿಶುಮಂದಿರದ ಪ್ರವೀಣ್ ಕೊರೊಲ್ಪೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಶ್ರೀ ಸುನಿಲ್ ಕುಲಕರ್ಣಿ, ಉದ್ಯಮಿ ದೀಪಕ್ರಾವ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ಎನ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ, ಧನ್ಯವಾದಗೈದರು.