ಬಂಟ್ವಾಳ: ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಭದ್ರತೆ,ಪ್ರಗತಿ,ರಾಷ್ರ್ರೀಯ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮುನ್ನಡೆಯುವ ಚುನಾವಣೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.


ಶುಕ್ರವಾರ ಬಿ.ಸಿ.ರೋಡಿನಲ್ಲಿ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪೇಜ್ ಪ್ರಮುಖರ ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಜಾತಿ,ಹಣಬಲವಿಲ್ಲದೆ ಆಗಸದೆತ್ತರಕ್ಕೆ ಬೆಳೆದಿರುವ ಸಾಮಾನ್ಯಕಾರ್ಯಕರ್ತ ನರೇಂದ್ರ ಮೋದಿಯ ಬಗ್ಗೆ ವಿಪಕ್ಷಗಳು ಹಗುರವಾಗಿ ಮಾತನಾಡಿಕೊಳ್ಳುತ್ತಿದ್ದರೆ, ಪ್ರಪಂಚದ ಸರ್ವರಾಷ್ಟ್ರಗಳು ಮೋದಿಯ ಸಾಧನೆಯನ್ನು ಶ್ಲಾಘಿಸುವುದರ ಜೊತೆಗೆತಮ್ಮ ದೇಶಕ್ಕೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದೆ ಎಂದರು. ಪಾಕಿಸ್ತಾನದಂತ ಶತ್ರು ದೇಶಗಳೇ ಇಂದು ಮೋದಿಯ ಹೆಸರು ಕೇಳಿದರೆ ಭಯಪಡುತ್ತಿದ್ದು,ಕಾಂಗ್ರೆಸ್ ನಾಯಕರು ಮಾತ್ರ ಮೋದಿಯನ್ನು ಟೀಕಿಸುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು ಮೋದಿಯವರ ಕಾರ್ಯ ವೈಖರಿಯಿಂದ ದೇಶದ ಯುವ ಸಮುದಾಯದಲ್ಲಿ ದೇಶ ಪ್ರೇಮ ಮೊಳಗುವಂತಾಗಿದೆ.ಭಾರತಮಾತೆ ನಿಜವಾದ ಆರ್ಥದಲ್ಲಿ ಸಿಂಹಧಾರಣಿಯಾಗಿ ಕಂಡು ಬರುತ್ತಿದ್ದಾಳೆ ಎಂದರು.ಬಡತನದ ಬೇನೆಯನ್ನು ತಮ್ಮ ನೈಜ ಜೀವನದಲ್ಲಿ ಅರಿತಿರುವ ಮೋದಿ ಐದು ವರ್ಷದ ಆಡಳಿತಾವಧಿಯಲ್ಲಿ ಹಲವಾರು ಜನಪರ ಯೋಜನೆಯನ್ನ ಜಾರಿಗೊಳಿಸಿ ದೇಶದ ಜನರ ಮನೆ,ಮನ ಮುಟ್ಟಿದ್ದಾರೆ.ಅವರು ದೇಶದ ಹೊರಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಎದೆ ನಡುಗಿಸದ್ದು ಮಾತ್ರವಲ್ಲ ಒಳಗಡೆಯೂ ಭ್ರಷ್ಟರ ವಿರುದ್ದ ಸರ್ಜಿಕಲ್ ಸ್ಟ್ರೈಕ್ ನಂತ ದಾಳಿ ನಡೆಸಿ ಬಾಯಿಮುಚ್ಚಿಸಿದ್ದಾರೆ ಎಂದರು.
ಮೈತ್ರಿ ನಾಯಕರಿಗೆ ಗಾಬರಿ: ಯಾರೋ ಇಂಜಿನಿಯರ್, ಗುತ್ತಿಗೆದಾರನ ಮನೆಗೆ ಐಟಿ ದಾಳಿ ನಡೆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯಾದಿಯಾಗಿ ರಾಜ್ಯಸರಕಾರ ಮೈತ್ರಿಪಕ್ಷದ ನಾಯಕರು ಗಾಬರಿ ಪಟ್ಟು ಪ್ರತಿಭಟನೆಗಿಳಿದಿರುವುದನ್ನು ಟೀಕಿಸಿದ ಆಯನೂರು ಮಂಜುನಾಥ್ ಎಲ್ಲಾ ಕಳ್ಳಮಾಲುಗಳು ಇವರಲ್ಲೆ ಇದ್ದು,ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಮಗೆ ಉಳಿಗಾಲವಿಲ್ಲ ಅದಕ್ಕಾಗಿ ಎಲ್ಲರೂ ಒಟ್ಟಾಗಿ ಬೀದಿಗಿಳಿದಿದ್ದಾರೆ ಎಂದರು.
ಕಾಂಗ್ರೆಸ್ ನಸೀರೆ,ಜೆಡಿಎಸ್ ತಾಳಿ: ಮತ್ತೊಮ್ಮೆ ಪ್ರಧಾನಿಯಾಗುವ ಕನಸಿನಲ್ಲಿರುವ ದೇವೇಗೌಡರ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿ ಗಳ ಕೊರತೆಯಿಂದ ತಾವು ಸಹಿತ ಇಬ್ಬರು ಮೊಮ್ಮಕ್ಕಳಿಗೆ ಟಿಕೇಟ್ ನೀಡಿದರೆ,ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಮೋದ್ ಅವರನ್ನು ಕರೆತಂದು ಟಿಕೆಟ್ ನೀಡಲಾಗಿದೆ.ಪ್ರಮೋದ್ ಅವರಿಗೆ ಸದ್ಯ ಕಾಂಗ್ರೆಸ್ ನ ಸೀರೆ,ಜೆಡಿಎಸ್ ನ ತಾಳಿ.. ಎಂಬಂತಾಗಿದೆ.ಮೇ ಕಳೆದ ಬಳಿಕ ಇವರ ಸ್ಥಿತಿ ಏನೋ? ಎಂದರು. ಪ್ರತಿ ವಿಚಾರದಲ್ಲೂ ಕಣ್ಣೀರು ಸುರಿಸಿ ನಾಟಕವಾಡುವ ಸಿಎಂ ಕುಮಾರಸ್ವಾಮಿ ಸಹಿತ ಜೆಡಿಎಸ್ ಮುಖಂಡರಿಂದ” ಕಣ್ಣೀರು ಮುಕ್ತ ಕರ್ನಾಟಕ”ವನ್ನಾಗಿಸಬೇಕು,ದ.ಕ.ಜಿಲ್ಲೆಯಲ್ಲಿ ಸೂತ್ರ,ಶಾಸ್ತ್ರದ ಮೂಲಕ ಸಂಘಟನೆಯನ್ನು ಕಟ್ಟಿರುವ ಕಾರ್ಯಕರ್ತರ ಪರಿಶ್ರಮದ ಫಲವಾಗಿ ದಾಖಲೆಯ ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.ತನ್ಮೂಲಕ ಸ್ವಾರ್ಥರಹಿತ,ನೈಜರಾಜಕಾರಣಿ ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ ಎಂದರು. ಸಂಸದ,ಅಭ್ಯರ್ಥಿನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ,ಹರೀಶ್ ಪೂಂಜಾ,ಮಾಜಿ ಶಾಸಕರಾದ ರುಕ್ಮಯಪೂಜಾರಿ, ಯೋಗೀಶ್ ಭಟ್ ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ,ಕ್ಯಾ. ಗಣೇಶ್ ಕಾರ್ಣಿಕ್,ಪ್ರಭಾರಿ ಪ್ರತಾಪಸಿಂಹ ನಾಯಕ್ , ಜಿಲ್ಲಾ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ತಾಲೂಕುಸಂಚಾಲಕ ಹರಿಕೃಷ್ಣ ಬಂಟ್ವಾಳ,ಜಿಲ್ಲಾ ಎಸ್.ಸಿ.ಮೋರ್ಚಾಅಧ್ಯಕ್ಷ ದಿನೇಶ್ ಅಮ್ಟೂರು,ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ,ಜಿಲ್ಲಾ ಪ್ರ. ಕಾರ್ಯದರ್ಶಿಗಳಾದ ಕ್ಯಾ.ಬ್ರಿಜೇಶ್ ಚೌಟ, ಸುದರ್ಶನ್ ಮೂಡಬಿದ್ರೆ, ಕಾರ್ಯದರ್ಶಿ ಸುಗುಣ ಕಿಣಿ, ರವಿಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.ಜಿಲ್ಲಾ ಬಿಜೆಪಿ ಅಧ್ಯಕ್ಷ , ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು.ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ್ ಬಂಟ್ವಾಳ ನಿರೂಪಿಸಿದರು. ಇದೇ ವೇಳೆ ಅಮ್ಟಾಡಿ ಗ್ರಾ.ಪಂ.ಸದಸ್ಯ ನವೀನ್ ಸಹಿತ ಹಲವರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದರು.