ಅಟ್ಟ ಸೇರಿದ
ಕೆರೆ ಹಾವನ್ನ
ಹೊರ ಹಾಕುವಲ್ಲಿ
ಯಶಸ್ವಿಯಾದೆ..!
ಆದರೆ…!?


ಪೇಪರ್ ಓದು ಬಿಟ್ಟು
ಬ್ರೇಕಿಂಗ್ ನ್ಯೂಸ್ ಗೆ ಅಂಟಿಬಿಟ್ಟಿದ್ದೆ..
ಟಿವಿ ಆನ್ ಮಾಡಿ
ಕಣ್ಣರಳಿಸಿ ನೋಡಿದಾಗ
“ನಿನ್ನೆ ಇದೇ ಮನೆಗೆ ಕೆರೆ ಹೊಕ್ಕಿದ್ದು
ಬನ್ನಿ ನೋಡುವ
ಆ ಹಾವು ಹೇಗಿತ್ತು,
ಎಲ್ಲಿಂದ ಬಂತು,
ಇಲ್ಲಿಗ್ಯಾಕೆ ಬಂತು.,
ಎಷ್ಟುದ್ದ, ಎಷ್ಟು ವಯಸ್ಸು..!?”
ಎಲ್ಲಾ ನ್ಯೂಸ್ ಚಾನಲ್ ನಲ್ಲೂ
ಅದೇ ಸುದ್ದಿ..!
ಬರುತ್ತಿದ್ದದ್ದು ನಮ್ಮನೆ ಚಿತ್ರವೇ..
ಬಾಗಿಲು ತೆಗೆದು ನೋಡಿದ್ದು
ಅವರು ಬೆಲ್ ಮಾಡಿದ್ದು
ಒಂದೇ ಸಮಯ..!
ನಾಲ್ಕು ಮೈಕ್
ನಾಲ್ಕು ಕ್ಯಾಮರಾ
ಎಂಟು ಜನ
ಹೇಳಿ ಸರ್ ಏನಾಯ್ತು..?
ಎಲ್ಲಿಂದ ಬಂತು..?
ಹೇಗಿತ್ತು..?
ಏನು ಮಾಡಿದ್ರಿ..
ಪ್ರಶ್ನೆಗಳ ಸುರಿಮಳೆ.
ನಮ್ಮನೆ ಟಿವಿಯಲ್ಲೂ ನಾನೇ..
ಉತ್ತರಗಳಿಲ್ಲದ ಬೆಪ್ಪನಾಗಿ..!
ಕೆರೆ ಬರುವುದೇನು
ಹೊಸತಲ್ಲ..
ಅಜ್ಜ ಇದ್ದಾಗಲೂ ಬರುತ್ತಿತ್ತು..
ಅಪ್ಪ ಇರುವಾಗಲೂ ಓಡುತ್ತಿತ್ತು.
ನನ್ನ ಮೊದಲ ರಾತ್ರಿಗೇ ಬಂದಿತ್ತು
ಇಂದು ಮಗ ಇದ್ದಾಗಲೂ ಬಂದಿತ್ತು..
ನಿನ್ನೆ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ
ಫೇಸ್ ಬುಕ್ ವಾಲ್ನಲ್ಲಿ
ಹಂಚಿಕೊಂಡಿದ್ದೆನಷ್ಟೇ…
ಅದೇ ನ್ಯೂಸ್ ಚಾನಲ್ ಗೆ ನ್ಯೂಸ್ ಆದದ್ದು..
ಬ್ರೇಕಿಂಗ್ ನ್ಯೂಸ್..
ನಾಳೆ ನಿಮ್ಮದೇ ಮನೆಯಲ್ಲಿ
ನೀವು ಉಚ್ಚೆ ಹುಯ್ದದ್ದು
ಆಗಬಹುದು…!?
✍ಯತೀಶ್ ಕಾಮಾಜೆ













