ಬಂಟ್ವಾಳ: ಲಾಠಿ ಹಿಡಿದು ಟ್ರಾಫಿಕ್ ಕಂಟ್ರೋಲ್ ಮಾಡುವ ಪೋಲೀಸರು ಹಾರೆ , ಬುಟ್ಟಿ ಹಿಡಿದು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದು ವ್ಯಾಪಕ ಸುದ್ದಿಗೆ ಕಾರಣವಾಯಿತು. ಇದು ಮೆಲ್ಕಾರ್ ಟ್ರಾಫಿಕ್ ಪೋಲೀಸರ ಕಾರ್ಯ. ನಿಜಕ್ಕೂ ಶ್ಲಾಘನೀಯ ಕಾರ್ಯ, ಮಾನವೀಯ ಕೆಲಸವನ್ನು ಮಾಡಿದ ಪೋಲೀಸರಿಗೆ ದೊಡ್ಡ ಸಲಾಂ ಹೇಳಲೇಬೇಕು. ಹೆದ್ದಾರಿ ಇಲಾಖೆ ಮಾಡಬೇಕಾದ ಕಾರ್ಯವನ್ನು ಟ್ರಾಫಿಕ್ ಪೋಲೀಸರು ಮಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೆದ್ದಾರಿ ಯುದ್ದಕ್ಕೂ ಗುಂಡಿಯಾಗಿದೆ. ಹಾಗಾಗಿ ಬಿ.ಸಿ. ರೋಡಿನಿಂದ ಮಾಣಿವರೆಗೂ ರಸ್ತೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ.
ಇದೇ ಪರಿಸ್ಥಿತಿ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಎದುರುಕಡೆಯ ಅಗುತ್ತಿತ್ತು.
ಟ್ರಾಫಿಕ್ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಹೊಂಡ ಗುಂಡಿಗಳಿಂದ ಕೂಡಿದ್ದು, ದ್ವಿಚಕ್ರವಾಹನ ಸವಾರರು ಗುಂಡಿಗೆ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಜೊತೆಗೆ ಹೊಂಡ ಗುಂಡಿಗಳ ಸಮಸ್ಯೆ ಯಿಂದ ಇಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತವೆ. ಈ ಸಮಸ್ಯೆಯ ಬಗ್ಗೆ ಅರಿತುಕೊಂಡ ಟ್ರಾಫಿಕ್ ಪೋಲೀಸರು ಸ್ವತಃ ಕೈಯಲ್ಲಿ ಹಾರೆ, ಬುಟ್ಟಿ ಹಿಡಿದು ಗುಂಡಿ ಮುಚ್ಚುವ ಕೆಲಸ ಮಾಡಿ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಚರಂಡಿ ವ್ಯವಸ್ಥೆ ಇಲ್ಲ:
ಚತುಷ್ಪತ ಕಾಮಗಾರಿ ಯ ಹಿನ್ನೆಲೆಯಲ್ಲಿ ರಸ್ತೆಯನ್ನು ಅಲ್ಲಲ್ಲಿ ಕಡಿದು ಅರ್ಧಕ್ಕೆ ನಿಲ್ಲಿಸಿದ ಹೋದ ಕಂಪೆನಿಯಿಂದ ಕಳೆದ ಎರಡು ವರ್ಷಗಳಿಂದ ವಾಹನಸವಾರರು ನರಕಯಾತನೆ ಅನುಭವಿಸುವಂತಾಯಿತು.
ರಸ್ತೆ ಯ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹೆದ್ದಾರಿ ಮಧ್ಯೆ ಯೇ ಹರಿದು ಹೋಗುತ್ತಿದೆ. ರಸ್ತೆಯಲ್ಲಿ ನೀರು ಹರಿದು ಹೋದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಹೊಂಡಗುಂಡಿಗಳು ಬಿದ್ದಿದೆ ಎಂಬ ಆರೋಪಗಳು ಕೇಳಿಬಂದಿವೆ.

