ಬಂಟ್ವಾಳ: ಮರಳು ಸಮಸ್ಯೆಯ ಬಗ್ಗೆ ಬೆಂಗಳೂರಿನಲ್ಲಿ ಇಂದು ವಿಶೇಷ ಸಭೆ ನಡೆದು ಪರಿಹಾರಕ್ಕೆ ಕ್ರಮಗೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಕರಾವಳಿಯ ದಕ್ಷಿಣ ಕನ್ನಡ , ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಳುಗಾರಿಕೆಗೆ ಇದ್ದಂತಹ ಸಮಸ್ಯೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಮರಳಿನ ಸಮಸ್ಯೆಯ ವಿಚಾರದಲ್ಲಿ ಚರ್ಚಿಸಲು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಗಣಿ ಸಚಿವ ರಾಜಶೇಖರ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಸಭೆ ನಡೆಯಿತು.
ಕರಾವಳಿ ಭಾಗದ ಜನರಿಗೆ ನಿವೇಶನ ಕ್ಕಾಗಿ ಕಳೆದ ಕೆಲವು ದಿನಗಳಿಂದ ತೀರ ಮರಳು ಸಮಸ್ಯೆ ಉದ್ಬವವಾಗಿದ್ದು ಈ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಶಾಸಕ ರ ಮತ್ತು ಅಧಿಕಾರಿಗಳ ಜೊತೆ ಕೆಲ ಕಾಲ ಚರ್ಚೆ ನಡೆದ ಬಳಿಕ ಮುಂದಿನ ಹತ್ತು ದಿನದೊಳಗೆ ಜನರಿಗೆ ಸುಲಭ ಹಾಗೂ ಕನಿಷ್ಟ ಬೆಲೆಯಲ್ಲಿ ಮರಳು ನೀಡುವಂತೆ ತೀರ್ಮಾನಕ್ಕೆ ಬರಲಾಯಿತು.
ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಬೇರೆ ಯಾವುದೇ ರೀತಿಯ ಕ್ರಮಗಳ ಮೂಲಕ ಜನರಿಗೆ ಮರಳು ನೀಡುವಂತೆ ಸಭೆಯಲ್ಲಿ ತಿಳಿಸಿದ್ದು ಇನ್ನು ಮುಂದೆ ಮರಳು ಸಮಸ್ಯೆ ಬರಬಾರದು ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ಸಚಿವೆ ಜಯಮಾಲ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್ ಅಂಗಾರ ಮತ್ತಿತರರು ಉಪಸ್ಥಿತರಿದ್ದರು.
