ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಕೊರೋನಾ ಮಹಾಮಾರಿಯ ವಿರುದ್ಧ ನಮ್ಮನ್ನು ರಕ್ಷಿಸಲು ಕೈಗಳನ್ನು ಸ್ವಚ್ಛತೆಯಿಂದ ಇಡಲು ಲಾಕ್ಡೌನ್ ಸಂದರ್ಭ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ಮಂಗಳೂರಿನ ಉರ್ವಸ್ಟೋರ್ನ ಭುವಿನಾ ಡೆಂಟಲ್ ಕ್ಲಿನಿಕ್ನ ಡೆಂಟಲ್ ಸರ್ಜನ್ ಡಾ.ಅಶ್ವತ್ಥ್ ಕುಮಾರ್ ಅವರ ಪ್ರಾಯೋಜಕತ್ವದಲ್ಲಿ 100 ಮುಖಕವಚ(ಮಾಸ್ಕ್) ಮತ್ತು 100 ಸ್ಯಾನಿಟೈಸರ್ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಡಾ.ಅಶ್ವತ್ಥ್ ರವರು ಮಾತನಾಡಿ, ಹೆಚ್ಚುತ್ತಿರುವ ಕೊರೋನಾ ಹಾವಳಿಯಿಂದ ಗೃಹರಕ್ಷಕರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಖಕವಚ(ಮಾಸ್ಕ್) ಮತ್ತು ಸ್ಯಾನಿಟೈಸರ್ಗಳನ್ನು ನೀಡಲಾಗಿದೆ ಎಂದರು. ಕೊರೋನಾ ವೈರಸ್ನಿಂದ ರಕ್ಷಿಸಲು ಮುಖಕ್ಕೆ ಮಾಸ್ಕ್ ಧರಿಸಬೇಕು ಮತ್ತು ಸ್ವಚ್ಛತೆಗಾಗಿ ಸ್ಯಾನಿಟೈಸರ್ನ್ನು ಬಳಸಬೇಕು ಹಾಗೂ ಕೊರೋನಾ ಮಹಾಮಾರಿಯಿಂದ ನಮ್ಮನ್ನು ನಾವು ಮೊದಲು ರಕ್ಷಿಸಿಕೊಳ್ಳಬೇಕು ಎಂದು ಗೃಹರಕ್ಷಕರಿಗೆ ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ ಚೂಂತಾರು ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಗೃಹರಕ್ಷಕ/ಗೃಹರಕ್ಷಕಿಯರು ಮತ್ತು ಜಿಲ್ಲಾ ಕಛೇರಿಯ ಪ್ರಥಮದರ್ಜೆ ಸಹಾಯಕಿ ಅನಿತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ ವಂದನಾರ್ಪಣೆಯನ್ನು ಮಾಡಿದರು.

