ಧರ್ಮಸ್ಥಳ: ತ್ಯಾಗತಪಸ್ಸು ಮತ್ತು ಮೋಕ್ಷದ ಪ್ರತೀಕವಾದ ಬಾಹುಬಲಿ ಜೈನಧರ್ಮದ ಸಮಸ್ಥ ಮೌಲ್ಯಗಳ ಪ್ರತಿರೂಪ. ರಾಜಭೋಗಜೀವನ ತ್ಯಜಿಸಿ ಮೋಕ್ಷದಋಜು ಮಾರ್ಗವನ್ನು ಆರಿಸಿಕೊಂಡು ಆಧ್ಯಾತ್ಮಿಕ ಉತ್ತುಂಗಕ್ಕೇರಿದ ಬಾಹುಬಲಿಯ ಜೀವನ ಇಂದಿಗೂ ಎಲ್ಲಾಜೈನ ಧರ್ಮೀಯರಿಗೆ ಆದರ್ಶ ಪ್ರಾಯವಾದದ್ದು. ರಾಜ್ಯದೊಂದಿಗೆ ಉಟ್ಟಬಟ್ಟೆಯನ್ನೂ ತ್ಯಜಿಸಿದ ಬಾಹುಬಲಿ ಆಡಂಬರ, ಅಭಿಷೇಕ ಇವೆಲ್ಲವುಗಳ ಪರಿಧಿಯನ್ನು ಮೀರಿ ನಿಂತವರು. ಆದರೂ ಅವರ ಪರಮೋಚ್ಛ ತ್ಯಾಗ- ತಪಸ್ಸಿನ ಗುಣಗಳನ್ನು ಆರಾಧಿಸುವ ಭಕ್ತರು 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಗಗನ ಸದೃಶ ಮೂರ್ತಿಯ ತಲೆಯಿಂದ ಕಾಲಿನೆಡೆಗೆ ಹರಿದು ಬರುವ ಅಭಿಷೇಕ ದ್ರವ್ಯಗಳು ಮನುಷ್ಯನೊಳಗೆ ಹುದುಗಿರುವ ಅಹಂ ತಲೆಯಿಂದಿಳಿದು ಕಾಲಿನಿಂದಾಚೆಗೆ ಹರಿದು ಹೋಗಬೇಕು, ಮನಸ್ಸು ನಿರ್ಮಲವಾಗಬೇಕು ಎಂಬ ಸಂದೇಶವನ್ನು ಭಕ್ತಾದಿಗಳಿಗೆ ನೀಡುತ್ತದೆ. ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ಕಲ್ಲಿನಲ್ಲಿ ಮೂಡಿಸಿದ ವಿಗ್ರಹದ ರಕ್ಷಣೆಗಾಗಿ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಬೇಕೆನ್ನುವ ವೈಜ್ಞಾನಿಕ ಕಾರಣವೂ ಮಹಾಮಸ್ತಕಾಭಿಷೇಕದ ಹಿಂದಿದೆ.




ಧರ್ಮಸ್ಥಳದಲ್ಲಿ ತ್ಯಾಗಮೂರ್ತಿ ಪ್ರತಿಷ್ಠಾಪನೆ:
ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ಪ್ರತಿಷ್ಠಾಪಿತನಾಗಿರುವ ಭಗವಾನ್ ಶ್ರೀ ಬಾಹುಬಲಿಯ 39 ಅಡಿ ಎತ್ತರದ ವಿರಾಟ್ ಮೂರ್ತಿ ಹೆಗ್ಗಡೆ ಕುಟುಂಬದ ಸಂಕಲ್ಪ ಶಕ್ತಿಯ ಪ್ರತೀಕವಾಗಿ ಪ್ರತಿಷ್ಠಾಪಿತವಾಗಿದೆ. ದಿ. ಶ್ರೀ ರತ್ನವರ್ಮ ಹೆಗ್ಗಡೆ ಮತ್ತು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಸಂಕಲ್ಪದಿಂದ ಪ್ರಾರಂಭವಾದ ಬಾಹುಬಲಿ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಳಿಸಿದ್ದು ಧರ್ಮಸ್ಥಳದ ಇಂದಿನ ಧರ್ಮಾಧಿಕಾರಿ ಪೂಜ್ಯಡಾ|| ಡಿ. ವೀರೇಂದ್ರ ಹೆಗ್ಗಡೆಯವರು. ವಿಗ್ರಹವನ್ನು ಕೆತ್ತಿದ್ದು ಶ್ರೀ ರೆಂಜಾಳ ಗೋಪಾಲಕೃಷ್ಣ ಶೆಣೈಅವರು. 1967ರಲ್ಲಿ ಕಾರ್ಕಳದ ಮಂಗಳ ಪಾದೆಯಲ್ಲಿ ವಿಗ್ರಹಕೆತ್ತನೆ ಕಾರ್ಯ ಆರಂಭಿಸಲಾಗಿತ್ತು. 1973ರಲ್ಲಿ ಕಾರ್ಕಳದಿಂದ ಧರ್ಮಸ್ಥಳಕ್ಕೆ ವಿಗ್ರಹ ಸಾಗಿಸಿದ್ದು,1975ರಲ್ಲಿ ಪ್ರಾರಂಭವಾದ ಪ್ರತಿಷ್ಠಾಪನಾ ಕಾರ್ಯ ಹಾಗೂ 1982ರಲ್ಲಿ ನಡೆದ ಪ್ರಥಮ ಮಹಾಮಸ್ತಕಾಭಿಷೇಕ ಪವಾಡ ಸದೃಶಕಾರ್ಯ, ಇಂದಿಗೂ ಅವಿಸ್ಮರಣೀಯಎಂದುಘಟನೆಗೆ ಸಾಕ್ಷಿಯಾದವರು ನೆನಪಿಸಿಕೊಳ್ಳುತ್ತಾರೆ.
ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಕಾಭಿಷೇಕಗಳು:
1982ರ ಫೆ.4ರಂದು 108ನೇ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜ್ ಮತ್ತು 108ನೇ ಆಚಾರ್ಯ ಶ್ರೀ ವಿಮಲ ಸಾಗರ ಮಹಾರಾಜರ ನೇತೃತ್ವದಲ್ಲಿ ಪ್ರಥಮ ಮಹಾಮಸ್ತಕಾಭಿಷೇಕ ನಡೆದಿತ್ತು. 1995ರ ಫೆಬ್ರವರಿ 5ರಿಂದ 10ರವರೆಗೆ 108ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್ಜೀ ಮಹಾರಾಜರ ನೇತೃತ್ವದಲ್ಲಿ ದ್ವಿತೀಯ ಮಹಾಮಸ್ತಕಾಭಿಷೇಕ ನಡೆದಿತ್ತು. 2007ರ ಜನವರಿ 28ರಿಂದ ಫೆ.2ರವರೆಗೆ 108ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್ಜೀ ಮಹಾರಾಜರ ನೇತೃತ್ವದಲ್ಲಿತೃತೀಯ ಮಹಾಮಸ್ತಕಾಭಿಷೇಕ ನಡೆದಿತ್ತು.



2019ರ ಫೆಬ್ರವರಿ 9ರಿಂದ 18ರವರೆಗೆ ಮಹಾಮಸ್ತಕಾಭಿಷೇಕ:
ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ೪ನೇ ಮಹಾಮಸ್ತಕಾಭಿಷೇಕ 2019ರ ಫೆ.9ರಿಂದ ಫೆ.18ರವರೆಗೆ ಶ್ರೀ 108 ಆಚಾರ್ಯಶ್ರೀ ವರ್ಧಮಾನ ಸಾಗರ್ಜೀ ಮಹಾರಾಜ್ ಮತ್ತು ಶ್ರೀ 108 ಆಚಾರ್ಯಶ್ರೀ ಪುಷ್ಪದಂತ ಸಾಗರ್ಜೀಮಹಾರಾಜ್, ಶ್ರವಣಬೆಳಗೊಳದ ಪರಮಪೂಜ್ಯಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕಮಹಾಸ್ವಾಮೀಜಿಯವರ ಮಾರ್ಗದರ್ಶನ, ಕಾರ್ಕಳ ದಾನಶಾಲಾ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿಜರುಗಲಿದೆ. ನಾಡಿನ ಅನೇಕ ಮುನಿಗಳು, ಭಟ್ಟಾರಕರು, ತ್ಯಾಗಿಗಳು ಈ ಮಂಗಲಕರ ಮಹೋತ್ಸವದಲ್ಲಿ ಉಪಸ್ಥಿತರಿರುತ್ತಾರೆ.
ಐತಿಹಾಸಿಕ ಕ್ಷಣಕ್ಕೆ ದಿನಗಣನೆ:
ಫೆ.9ರಿಂದ ಧರ್ಮಸ್ಥಳದಲ್ಲಿ ಮಹಾವೈಭವ ನಡೆಯಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಧರ್ಮಸ್ಥಳ ಸಾಕ್ಷಿಯಾಗಲಿದೆ. ಸಾಂಪ್ರದಾಯಿಕವಾಗಿ ತೀರ್ಥಂಕರರ ಪಂಚಕಲ್ಯಾಣ ಕಾರ್ಯಕ್ರಮ ನೆರವೇರಿಸಿ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿತ್ತು. ಈ ಬಾರಿ ಆಚಾರ್ಯ ಶ್ರೀಗಳ ಮತ್ತು ಭಟ್ಟಾರಕರ ಅನುಮತಿ ಪಡೆದು ಶ್ರೀ ಭಗವಾನ್ ಬಾಹುಬಲಿ ಪಂಚ ಮಹಾವೈಭವದ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಣಯಿಸಲಾಗಿದೆ. ನಿತ್ಯವೂ ಪೂಜೆ, ಆರಾಧನೆಗಳು ಪೂರಕವಾಗಿ ನಡೆಯಲಿವೆ. ಈ ಕಾರ್ಯಕ್ರಮಗಳಲ್ಲಿ ಮುನಿಗಳ ಪ್ರವಚನದ ಪುಣ್ಯ ಲಾಭವೂ ದೊರೆಯಲಿದೆ.
ದಿನಂಪ್ರತಿ ವಿಶೇಷ ಕಾರ್ಯಕ್ರಮ:
ಫೆ.9ರ ಶನಿವಾರದಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆಯ ಬಳಿಕ ರತ್ನಗಿರಿಗೆ ಆಗ್ರೋದಕ ಮೆರವಣಿಗೆಯೊಂದಿಗೆ ಮಹಾಮಸ್ತಕಾಭಿಷೇಕದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಫೆ.16ರಂದು ಬೆಳಗ್ಗೆ 8.45ರ ಮೀನಲಗ್ನದ ಮಂಗಲ ಮುಹೂರ್ತದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 1008 ಪುಣ್ಯಾಮೃತ ಕಲಶಗಳಿಂದ ವಿಗ್ರಹ ಪ್ರತಿಷ್ಠಾಪಕರಾದ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬಸ್ಥರಿಂದ ಪ್ರಥಮ ಮಸ್ತಕಾಭಿಷೇಕ ನಡೆಯಲಿದೆ. ಸಂಜೆ ಧ್ವಜಪೂಜೆ, ಶ್ರೀ ಬಲಿ ವಿಧಾನ, ಮಹಾಮಂಗಳಾರತಿ ನಡೆಯಲಿದೆ. ಫೆ.11ರಂದು ಬಾಹುಬಲಿ ಪಂಚಮಹಾವೈಭವ ಅಂಗವಾಗಿ ಬೆಳಗ್ಗೆ 9.30ರಿಂದ ನವಯುಗಾರಂಭ. ಸಂಜೆ 4.30ರಿಂದ ಬಾಲಲೀಲೋತ್ಸವ. 12ರಂದು ಬೆಳಗ್ಗೆ ಆದಿನಾಥ ಮಹಾರಾಜರಿಂದ ಸ್ತ್ರೀ ಶಿಕ್ಷಣ, ಕಲೆ, ಸಂಸ್ಕೃತಿ. ಸಂಜೆ ಭೋಗದಿಂದ ತ್ಯಾಗದೆಡೆಗೆ. 13ರಂದು ಬೆಳಗ್ಗೆ ಚಕ್ರರತ್ನ ಉದಯ, ದಿಗ್ವಿಜಯ. ಸಂಜೆ ವೈಭವದ ಮೆರವಣಿಗೆಯೊಂದಿಗೆ ವೃಷಭಾಚಲದಿಂದ ಅಯೋಧ್ಯೆಗೆ ಪಯಣ. 14ರಂದು ಭರತ ಮತ್ತು ಬಾಹುಬಲಿ ಧರ್ಮಯುದ್ಧ. ಸಂಜೆ ಬಾಹುಬಲಿಯ ತ್ಯಾಗತ ಪಸ್ಸು. 15ರಂದು ಬೆಳಗ್ಗೆ ಸಮವಸರಣ ವೈಭವ, ಸಂಜೆ ಬಾಹುಬಲಿ ಕೇವಲ ಜ್ಞಾನ ನಡೆಯಲಿದೆ. ಫೆ.16, 17, 18ರಂದು ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ. ಫೆ.18ರಂದು ಮಧ್ಯಾಹ್ನ ನಂತರ ಧ್ವಜಾವರೋಹಣ, ತೋರಣವಿಸರ್ಜನೆ ನಡೆಯಲಿದೆ.
ಶ್ರೀ ಕ್ಷೇತ್ರದಲ್ಲಿ ಭರದ ಸಿದ್ಧತೆ:
ಪ್ರತಿಷ್ಠಾಪಕರಾದ ಪೂಜ್ಯಡಾ|| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ 4ನೇ ಮಹಾಮಸ್ತಾಭಿಷೇಕ ನಡೆಯಲಿದ್ದು, ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕರಾಗಿ ಡಿ. ಸುರೇಂದ್ರ ಕುಮಾರ್ ಮತ್ತು ಸಂಚಾಲಕರಾಗಿ ಡಿ.ಹರ್ಷೇಂದ್ರ ಕುಮಾರ್ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಸುವ್ಯವಸ್ಥಿತವಾಗಿ ನಡೆಯಲು 26 ಸಮಿತಿಗಳನ್ನು ರಚಿಸಿ ಸಂಚಾಲಕರು ಮತ್ತು ಸಂಯೋಜಕರನ್ನು ನೇಮಿಸಲಾಗಿದೆ. ಇದು ರಾಜ್ಯಮಟ್ಟದ ಸಂಪರ್ಕ ಸಮಿತಿ, ಅಟ್ಟಳಿಗೆ ನಿರ್ಮಾಣ ಸಮಿತಿ, ಆರ್ಥಿಕ ಸಮಿತಿ, ಅಭಿಷೇಕ ಮತ್ತು ಅಟ್ಟಳಿಗೆ ಸಮಿತಿ, ಪೂಜಾ ಸಮಿತಿ, ಪಂಚಕಲ್ಯಾಣ ಸಮಿತಿ, ಸಾಂಸ್ಕೃತಿಕ ಸಮಿತಿ, ತ್ಯಾಗಿ ಸೇವಾ ಸಮಿತಿ, ಚಪ್ಪರ ಸಮಿತಿ, ಆಹಾರ ಸಮಿತಿ ಮೊದಲಾದ ಸಮಿತಿಗಳನ್ನು ಒಳಗೊಂಡಿದೆ.
ಅಟ್ಟಳಿಗೆ ಮುಹೂರ್ತ:
ಮಹಾಮಸ್ತಕಾಭಿಷೇಕ ಅಂಗವಾಗಿ ಜ.2 ರಂದು ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ಅಟ್ಟಳಿಗೆ ಮುಹೂರ್ತಕ್ಕೆ ಚಾಲನೆ ನೀಡಲಾಗಿದೆ. ಮಾಣಿ, ಬುಡೋಳಿಯ ಮಹಾವೀರ ಪ್ರಸಾದ್ ಇಂಡಸ್ಟ್ರಿ ನೇತೃತ್ವದಲ್ಲಿ ಅಟ್ಟಳಿಗೆ ನಿರ್ಮಾಣ ನಡೆಯಲಿದೆ.
1. ಪಂಚಮಹಾ ವೈಭವದಎಲ್ಲಾ ಪೂರ್ವ ತಯಾರಿಗಳು ಭರದಿಂದ ನಡೆಯುತ್ತಿದೆ.
2. ತ್ಯಾಗಿಗಳ ಸ್ವಾಗತಕ್ಕಾಗಿ/ ತ್ಯಾಗಿಗಳ ವಸತಿ, ಆಹಾರದಾನಕ್ಕೆ ಬೇಕಾದ ಸಿದ್ಧತೆ ಪ್ರಾರಂಭಗೊಂಡಿದೆ.
3. ಆಹಾರದ ಚಪ್ಪರಗಳ ತಯಾರಿಯ ಕೆಲಸ ಪ್ರಾರಂಭವಾಗಿದೆ.
4. ಮಸ್ತಕಾಭಿಷೇಕದಂದುಅಭಿಷೇಕ ಮಾಡುವ ಕಲಶಗಳ ಬೇಡಿಕೆಗಳು ದಿನದಿಂದ ದಿನ ಹೆಚ್ಚುತ್ತಿದೆ.
5. ಕರ್ನಾಟಕದಾದ್ಯಂತ ಮಹೋತ್ಸವದ ಬಗ್ಯೆ ಸಭೆಗಳನ್ನು ನಡೆಸಲಾಗಿದೆ.