ಬೆಳ್ತಂಗಡಿ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ 2020ನೇ ಸಾಲಿನ ಎಪ್ರೀಲ್ ತಿಂಗಳಲ್ಲಿ ಸಂಘಕ್ಕೆ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಲೀಟರ್ ಗೆ 1 ರೂಪಾಯಿಯಂತೆ ಒಟ್ಟು 62,000 ರೂ. ಪ್ರೋತ್ಸಾಹಧನ ಹಾಗೂ ಸಿಬಂದಿಗಳಿಗೆ ಒಟ್ಟು 5000 ರೂ. ಪ್ರೋತ್ಸಾಹಧನವನ್ನು ನೀಡಲು ನಿರ್ಧರಿಸಲಾಯಿತು.

ಇಂದು ನಡೆದ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ದೇಶಕರೆಲ್ಲರೂ ಸೇರಿ ತೆಗೆದುಕೊಂಡ ನಿರ್ಣಯದಂತೆ ಸದಸ್ಯರಿಗೆ, ಸಂಘದ ಸಿಬಂದಿಗಳಿಗೆ ಪ್ರೋತ್ಸಾಹಧನ ಹಾಗೂ ಸಂಘದ ಸದಸ್ಯರು ಮಾಡುವ ಒಕ್ಕೂಟದ ಜಾನುವಾರು ವಿಮೆಯಲ್ಲಿ 25%ರಷ್ಟು ಮೊತ್ತವನ್ನು ಸಂಘವೇ ಭರಿಸಲಿದೆ. ಒಂದು ವರ್ಷದ ಜಾನುವಾರು ವಿಮೆಯಲ್ಲಿ 75% ಒಕ್ಕೂಟವೇ ಭರಿಸಲಿದೆ. ಉಳಿದ 25% ಸಂಘ ಭರಿಸುವುದರಿಂದ ಹೈನುಗಾರರಿಗೆ ಆರ್ಥಿಕವಾಗಿ ಸಾಕಷ್ಟು ಸಹಕಾರಿಯಾಗಲಿದೆ ಎಂದು ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಮೊಗೆರೋಡಿ ಪ್ರಕಟಣೆಯಲ್ಲಿ ತಿಳಿಸಿದರು.
ಸದಸ್ಯರಿಗೆ ಪ್ರೋತ್ಸಾಧನವನ್ನು ಈ ವಾರ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಮಂಜಯ್ಯ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ಮಡಂತ್ಯಾರು ಹಾಲು ಉತ್ಪಾದಕ ಸಂಘದ ಪ್ರತಿದಿನ ಸರಾಸರಿ 2500 ಲೀ ಹಾಲು ಸಂಗ್ರಹಣೆ ಮಾಡುತ್ತಿದೆ. ಸುಮಾರು 250-260 ಮಂದಿ ಹೈನುಗಾರರು ದಿನನಿತ್ಯ ಸಂಘಕ್ಕೆ ಹಾಲನ್ನು ಪೂರೈಸುತ್ತಿದ್ದಾರೆ ಎಂಬ ಮಾಹಿತಿ ಇದೆ.

