ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ಜಾರಿಮಾಡಿದ್ದು , ಇದರಿಂದ ಸಮಸ್ಯೆಯಾದ ಹಲವಾರು ವರ್ಗಗಳಿಗೆ ಈ ಹಿಂದೆಯೇ ಪರಿಹಾರದ ಪ್ಯಾಕೇಜ್ನ್ನು ಯಡಿಯೂರಪ್ಪ ನೇತ್ರತ್ವದ ಸರ್ಕಾರ ಘೋಷಣೆ ಮಾಡಿದ್ದು ಪ್ರಸ್ತುತ ಬೇರೆ ಬೇರೆ ವರ್ಗದವರಿಂದಲೂ ತೊಂದರೆ ಅನುಭವಿಸುವ ಮನವಿಗಳು ಬಂದಿರುವುದನ್ನು ಮನಗಂಡ ಸರಕಾರ ಕೆಲವೊಂದು ಪರಿಹಾರದ ಘೋಷಣೆ ಮಾಡಿದೆ.

ಆರ್ಥಿಕ ಹಿಂಜರಿತನದ ಬಹು ದೊಡ್ಡ ಸಮಸ್ಯೆಯ ಮಧ್ಯೆ ಯೂ ಲಾಕ್ ಡೌನ್ ಸಮಸ್ಯೆ ಯಿಂದ ಕಷ್ಟ ಅನುಭವಿಸಿದ ವಿವಿಧ ವರ್ಗಗಳಿಗೆ ಸಿ.ಎಂ. ಪರಿಹಾರದ ಘೋಷಣೆ ಮಾಡಿದ್ದಾರೆ.
*ಯಾವ ಯಾವ ವರ್ಗಕ್ಕೆ ಎಷ್ಟು ಎಷ್ಟು* ?
1. ಚಲನಚಿತ್ರ ಮತ್ತುದೂರದರ್ಶನ ಮಾಧ್ಯಮದಲ್ಲಿನಅಸಂಘಟಿತಕಾರ್ಮಿಕರು
ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು ರೂ 6.6 ಕೋಟಿ ವೆಚ್ಚವಾಗಲಿದೆ.
2. ಮೀನುಗಾರರಿಗೆ ಪರಿಹಾರ
ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ತಲಾ ರೂ 3000 ಗಳ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ರೂ 5.6 ಕೋಟಿ ವೆಚ್ಚವಾಗಲಿದೆ.
ಇದಲ್ಲದೆ ಒಟ್ಟು 7,668 ಇನ್ಲ್ಯಾಂಡ್ ದೋಣಿ ಮಾಲಿಕರಿಗೆ ತಲಾ ರೂ 3,000ರಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ರೂ 2.3 ಕೋಟಿ ವೆಚ್ಚವಾಗಲಿದೆ. ಇದಲ್ಲದೆ ಮೀನುಗಾರರ ಸಂಘಗಗಳಿಂದ ಒಳನಾಡು ಮೀನುಗಾರಿಗೆಕೆ ಸರ್ಕಾರಕ್ಕೆ ನೀಡಬೇಕಾಗಿರುವ ಕಾಂಟ್ರಾಕ್ಟ್ ಫೀಸ್ನಲ್ಲಿ ಶೇ.25 ರೀಯಾಯಿತಿಯನ್ನು ಸಹ ನೀಡಲು ನಿರ್ಧರಿಸಲಾಗಿದೆ.
3. ಆಶಾ ಕಾರ್ಯಕರ್ತೆಯರು
ಆಶಾ ಕಾರ್ಯಕರ್ತೆಯರು ಕೋವಿಡ್-19ನ ಸೋಂಕನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ವರ್ಗದವರಿಗೆ ಸಹಾಯ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ಸರ್ಕಾರವು ಕೋವಿಡ್-19 ತಡೆಗಟ್ಟುವಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆದ ಆಶಾ ಕಾರ್ಯಕರ್ತರಿಗೆ ತಲಾ ರೂ 3,000 ಗಳ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಒಟ್ಟು 42,574 ಆಶಾ ಕಾರ್ಯಕರ್ತರಿಗೆ ಸಹಾಯವಾಗಲಿದ್ದು ಅಂದಾಜು ರೂ 12.75 ಕೋಟಿ ವೆಚ್ಚವಾಗಲಿದೆ.
4. ಮುಜರಾಯಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳು
ಮುಜರಾಯಿ ಇಲಾಖೆಯ “ಸಿ” ವರ್ಗದ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡಿಗೆ ಕೆಲಸಗಾರರು ಮತ್ತು ಸಿಬ್ಬಂದಿಗಳಿಗೆ ತಲಾ ರೂ 3,000 ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ವರ್ಗದಲ್ಲಿ ಸುಮಾರು 36,047 ಜನರಿದ್ದು ಇದರಿಂದ ರೂ 10.8 ಕೋಟಿ ವೆಚ್ಚವಾಗಲಿದೆ.
5. ಅಂಗನವಾಡಿ ಕಾರ್ಯಕರ್ತೆಯರು
64,423 ಅಂಗನವಾಡಿಯ ಕಾರ್ಯಕರ್ತರು ಹಾಗೂ 59,169 ಅಂಗನವಾಡಿ ಸಹಾಯಕರಿಗೆ ತಲಾ ರೂ 2,000 ಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 24.7 ಕೋಟಿ ವೆಚ್ಚವಾಗಲಿದೆ.
6. ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ನೀಡುವ ಬಗ್ಗೆ
ಈ ಸಮಯದಲ್ಲಿ ಹಾಲಿನ ಬೇಡಿಕೆ ಕಡಿಮೆಯಾಗಿದ್ದು ಹೈನು ಉದ್ಯಮದಲ್ಲಿ ತೊಡಗಿಸಿಕೊಂಡ ರೈತರಿಗೆ ಸಮಸ್ಯೆಯಾಗದಂತೆ ಹೆಚ್ಚುವರಿ ಹಾಲಿನಿಂದ ಪುಡಿ ತಯಾರಿಸಲು ನಿರ್ಧರಿಸಲಾಗಿದೆ. ಎಲ್ಲಾ ಶಾಲೆಗಳು ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಮುಚ್ಚಿದ್ದರೂ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದ್ದು ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಜೊತೆಗೆ ಅರ್ಧ ಕೆ.ಜಿ ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 100 ಕೋಟಿ ವೆಚ್ಚವಾಗಲಿದೆ.
7.ಅನುದಾನ ರಹಿತ ಶಾಲೆಗಳ ಶಿಕ್ಷಕರು
ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ 5,000 ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ.
8. ಪವರ್ ಲೂಮ್ ನೇಕಾರರು
ಪ್ರತಿ ಪವರ್ ಲೂಮ್ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ ರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ.
ಇದರಿಂದ ಸುಮಾರು 59 ಸಾವಿರ ಪವರ್ ಲೂಮ್ಗಳಿಗೆ 35 ಕೋಟಿ ವೆಚ್ಚವಾಗಲಿದೆ.
9 .ನ್ಯಾಯವಾದಿಗಳಿಗೆ ಪರಿಹಾರ
ನ್ಯಾಯವಾದಿಗಳ ಕಲ್ಯಾಣ ನಿಧಿಗೆ ರೂ 5 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಈ ನಿಧಿಯನ್ನು ಅಗತ್ಯವಿರುವ ನ್ಯಾಯವಾದಿಗಳು ಮತ್ತು ಬೆಂಚ್ ಗುಮಾಸ್ತರುಗಳಿಗೆ ಉಪಯೋಗಿಸಲಾಗುವುದು.
10. ಕೈಗಾರಿಕೆಗಳಿಗೆ ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗಧಿತ ಶುಲ್ಕಗಳನ್ನು ಪಾವತಿಸುವುದರಿಂದ ವಿನಾಯಿತಿಯನ್ನು ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 114.70 ಕೋಟಿ ಹೆರೆಯಾಗುತ್ತದೆಂದು ಅಂದಾಜಿಸಿದೆ.
11 .ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಪೇಶ್ ಇಮಾಮ್ ಮತ್ತು ಫೌಜಿಂ ಗಳಿಗೆ ತಲಾ 3,000 ರೂ. ನೆರವು ನೀಡಲಾಗುವುದು.
MSME ಕೈಗಾರಿಕೆಗಳನ್ನು ಹೊರತುಪಡಿಸಿ ಇತರೆ ಕೈಗಾರಿಕೆಗಳ ಗ್ರಾಹಕರು ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗಧಿತ ಶುಲ್ಕ ಪಾವತಿಸುವುದನ್ನು ದಿನಾಂಕ:30-7-2021 ರವರೆಗೆ ಮುಂದೂಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 5.56 ಕೋಟಿ ಹೊರೆಯಾಗುತ್ತದೆಂದು ಅಂದಾಜಿಸಿದೆ. ಈ ಎರಡು ಕ್ರಮಗಳಿಂದ ಸುಮಾರು 3 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.

