ಬಂಟ್ವಾಳ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಔದಾರ್ಯ ಅಧ್ಯಾಪಕರಲ್ಲಿರಬೇಕು. ಹಾಗೆಯೇ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಯನ್ನು ತೊರೆದು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಬೆಳೆಯಲು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ ಇತರೇ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇದಕ್ಕೆಲ್ಲಾ ಭಾರತೀಯ ಸಂಸ್ಕೃತಿಯಲ್ಲಿರುವ ಗಟ್ಟಿತನವೇ ಪೂರಕವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ (ಪರೀಕ್ಷಾಂಗ) ಪ್ರೊ.ವಿ. ರವೀಂದ್ರಾಚಾರಿ ನುಡಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ಕಾಲೇಜು ವಿಠೋಬ ವಿಠಲ 2019 ನೃತ್ಯ ಭಜನಾ ಸ್ಪರ್ಧೆಯನ್ನು ಉದ್ಘಾಟಸಿ ಮಾತನಾಡಿದರು. ಇಂದಿನ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಮಾರು ಹೋಗುತ್ತಿರುವ ಸಂದರ್ಭದಲ್ಲಿ ಈ ವಿದ್ಯಾ ಸಂಸ್ಥೆಯು ಹಳೆಯದಾದ ಹಾಗೂ ಯುವ ಪೀಳಿಗೆಗೆ ಕಣ್ಮರೆಯಾಗಿರುವ ಕುಣಿತ ಭಜನೆ ಸ್ಪರ್ಧೆಯನ್ನು ಅಂತರ್ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿರುವುದು ವಿಶೇಷ ಮತ್ತು ವಿಭಿನ್ನವಾಗಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿ, ಮುಂದಿನ ದಿನಗಳಲ್ಲಿ ಎಲ್ಲಾ ಕಾಲೇಜುಗಳಲ್ಲಿ ಸಂಸ್ಕೃತಿಗಳನ್ನೊಳಗೊಂಡ ಇಂತಹ ಸ್ಪರ್ಧೆಗಳು ನಡೆಯಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಕಾರ್ಯಕ್ರಮದ ಪ್ರಸ್ತಾವನೆಗೈದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಒಟ್ಟು 11 ಕಾಲೇಜುಗಳಿಂದ 11 ತಂಡ ಭಾಗವಹಿಸಿತ್ತು. ತೀರ್ಪುಗಾರರಾಗಿ ರಂಗಭೂಮಿ ಕಲಾವಿದ, ಅಂಕಣಕಾರ ಮೌನೇಶ್ ವಿಶ್ವಕರ್ಮ, ವಿವೇಕಾನಂದ ಬಿಎಡ್ ಕಾಲೇಜಿನ ಉಪನ್ಯಾಸಕಿ ಡಾ| ಶೋಭಿತಾ ಸತೀಶ್, ಯೋಗೀಶ್ ಶಂಭೂರು, ಪ್ರಶಾಂತ್ ನರಿಕೊಂಬು ಆಗಮಿಸಿದ್ದರು.
ಅತಿಥಿಗಳನ್ನು ವಿದ್ಯಾರ್ಥಿಗಳಾದ ಸಂತೋಷ್ ಸ್ವಾಗತಿಸಿ, ವರದರಾಜ್ ವಂದಿಸಿ, ತ್ರಿವೇಣಿ ಕಾರ್ಯಕ್ರಮವನ್ನು ನಿರೂಪಿಸಿದರು.