ವಿಟ್ಲ: ಹಿರಿಯರು ಯುವಕರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದಾಗ ಯುವಕರು ದಾರಿ ತಪ್ಪಲು ಸಾಧ್ಯವಿಲ್ಲ. ಯುವಕರನ್ನು ದುರ್ಬಳಕೆ ಮಾಡುವ ಕಾರ್ಯಕ್ರಮಗಳ ಮೂಲಕ ಯುವಕರು ದಾರಿ ತಪ್ಪಲು ಸಾಧ್ಯವಿದೆ. ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡುವ ಯುವಕರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಹೇಳಿದರು.
ಅವರು ಸೋಮವಾರ ಕೊಳ್ನಾಡು ಗ್ರಾಮದ ಕುಡ್ತಮುಗೇರು ಟಾಪ್ ಆಂಡ್ ಟಾಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಆಂಬ್ಯುಲೆನ್ಸ್ ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತಿ ಧರ್ಮ, ರಾಜಕೀಯ ಪಕ್ಷದ ವ್ಯತ್ಯಾಸವಿಲ್ಲದೇ ಎಲ್ಲಾ ಯುವಕರನ್ನು ಒಗ್ಗೂಡಿಸಿಕೊಂಡು ಬಡವರಿಗೆ ಅವಶ್ಯವಾಗಿರುವ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿರುವ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಆಂಬ್ಯುಲೆನ್ಸ್ ವಾಹನ ಕೀ ಹಸ್ತಾಂತರ ಮಾಡಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಅವರು ಹಿಂದಿನ ಕಾಲಘಟ್ಟದಲ್ಲಿ ಆಂಬ್ಯುಲೆನ್ಸ್ ಸೇವೆ ಅತ್ಯಾವಶ್ಯಕವಾಗಿದೆ. ಬಡವರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಜೀವನ ಸಾರ್ಥಕತೆ ಆಗುತ್ತದೆ. ಪರೋಪಕಾರ ಗುಣದವರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂದರು.
ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಶಂಕರ್ ಪಾಟಾಲಿ, ಮಂಗಳೂರು ಎಂಸಿಸಿ ಬ್ಯಾಂಕ್ನ ಅನಿಲ್ ಲೋಬೋ, ವಿಟ್ಲ ಎಸೈ ಯಲ್ಲಪ್ಪ, ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಕುಡ್ತಮುಗೇರು ಆರೋಗ್ಯ ವಿಸ್ತರಣಾ ಕೇಂದ್ರದ ವೈದ್ಯಾಧಿಕಾರಿ ಡಾ. ಸಮೀಕ್ಷಾ ಆಳ್ವ ಮೊದಲಾದವರು ಮಾತನಾಡಿದರು.
ಪ್ರಗತಿಪರ ಕೃಷಿಕ ಚಿತ್ತರಂಜನ್ ಕರೈ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸದಸ್ಯ ಪವಿತ್ರ ಪೂಂಜ, ಸಿ.ಎಚ್ ಅಬೂಬಕ್ಕರ್ ನಾರ್ಶ, ಹರೀಶ್ ಟೈಲರ್, ಟಾಫ್ ಆಂಡ್ ಟಾಫ್ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಅಬ್ಬಾಸ್ ಹಾಜಿ, ಗೌರವ ಸಲಹೆಗಾರ ಹಕೀಂ ಪರ್ತಿಪ್ಪಾಡಿ, ವೇಣುಗೋಪಾಲ್, ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಉಮ್ಮರ್ ಬೊಳ್ಳಚ್ಚಾರು, ಅನೀಸ್ ಕುಡ್ತಮುಗೇರು ಮೊದಲಾದವರು ಉಪಸ್ಥಿತರಿದ್ದರು.
ಟ್ರಸ್ಟ್ನ ಅಧ್ಯಕ್ಷ ನೌಫಲ್ ಕುಡ್ತಮುಗೇರು ಸ್ವಾಗತಿಸಿ, ನಿರೂಪಿಸಿದರು.
ಪೋಟೊ-೧೫ವಿಟಿಎಲ್-ಅಂಬ್ಯುಲೆನ್ಸ್
