ಉಜಿರೆ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ರಾಜ್ಯದೆಲ್ಲೆಡೆ ನಡೆಯುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳದಲ್ಲಿರುವ ಕೆ.ಎಸ್.ಆರ್.ಟಿ.ಸಿ.ಡಿಪೊದಿಂದ ಯಾವುದೇ ಬಸ್ಗಳು ಸಂಚಾರ ಮಾಡಿಲ್ಲ.
ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿ ಊಟ, ಉಪಾಹಾರದ ವ್ಯವಸ್ಥೆ ಮಾಡಿಕೊಂಡರು. ಚಾಲಕರು, ನಿರ್ವಾಹಕರು ಸೌಟು ಹಿಡಿದು ಊಟ ತಯಾರಿಸಿ, ಪ್ರಯಾಣಿಕರಿಗೂ ನಳಪಾಕದ ಸೊಗಡನ್ನು ತಿಳಿಸಿದರು.
ಪ್ರಯಾಣಿಕರ ಪರದಾಟ: ಶುಕ್ರವಾರ ಧರ್ಮಸ್ಥಳದಿಂದ ಎಲ್ಲಾ ಬಸ್ಗಳು ಸಂಚಾರ ಮಾಡಿವೆ. ಆದರೆ ಶನಿವಾರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಇವತ್ತು ಎರಡನೇ ಶನಿವಾರ ರಜಾದಿನವಾಗಿದ್ದು, ಲಕ್ಷದೀಪೋತ್ಸವಕ್ಕೆ ಅನೇಕ ಕಡೆಯಿಂದ ಪ್ರವಾಸಿಗರು ಬಂದಿದ್ದರು. ಮುಷ್ಕರದ ಬಿಸಿ ಅವರಿಗೂ ತಟ್ಟಿದೆ.














