(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯ ನಿಯೋಗವು ಇಂದಿಲ್ಲಿ ಬುಧವಾರ ನವಮುಂಬಯಿ ಬೇಲಾಪುರ ಅಲ್ಲಿನ ಕೊಂಕಣ್ ಭವನಕ್ಕೆ ಭೇಟಿ ನೀಡಿ ಕೊಂಕಣ್ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್ (ಕೆಆರ್ಸಿಎಲ್) ಆಡಳಿತ ನಿರ್ದೇಶಕ ಸಂಜಯ್ ಗುಪ್ತ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳಿಗಾಗಿ ಸ್ಪಂದಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿತು.
ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಗೌರವಾಧ್ಯಕ್ಷ ಶಂಕರ್ ಬಿ.ಶೆಟ್ಟಿ ವಿರಾರ್ ಪದಾಧಿಕಾರಿಗಳನ್ನು ಒಳಗೊಂಡು ಮುಂಬಯಿ ಮಂಗಳೂರು ಪ್ರಯಾಣಿಕರಿಗೆ ಸರ್ವೋತ್ತಮ ಸೇವೆ ಒದಗಿಸುವರೇ ಮನವಿ ಸಲ್ಲಿಸಿತು. ಈ ಸಂದರ್ಭ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಉಪಾಧ್ಯಕ್ಷ ಪ್ರೇಮನಾಥ ಪಿ.ಕೋಟ್ಯಾನ್, ಜೊತೆ ಕಾರ್ಯದರ್ಶಿ ರಜಿತ್ ಎಂ.ಸುವರ್ಣ, ಜಯ ಎ.ಶೆಟ್ಟಿ, ಕೆಆರ್ಸಿಎಲ್ ಪಿಆರ್ಒ ಗಿರೀಶ್ ಕರಂಡೇಕರ್ ಉಪಸ್ಥಿತರಿದ್ದರು.

ಮಂಗಳೂರು ಎಕ್ಸ್ಪ್ರೆಸ್ ಮತ್ತು ಮತ್ಸ್ಯಗಂಧ ರೈಲುಗಳನ್ನು ನೂತನ ತಂತ್ರಜ್ಞಾನ ಬಳಸಿ ವೇಗದಾಯಕ ಗೊಳಿಸುವಂತೆ, ಈ ರೈಲು ಮಾರ್ಗದಲ್ಲಿ ಸಂಚಾರಿಸುವ ರೈಲುಯಾನದಲ್ಲಿ ಲೂಟಿಕೋರರ ಮತ್ತು ಕಳ್ಳತನದ ಘಟನೆಗಳು ದಿನೇದಿನೇ ಹೆಚ್ಚಾಗುತ್ತಿದ್ದು ಇವುಗಳಿಗೆ ಕಡಿವಾಣ ಹಾಕಿ ಅಪರಾಧಮುಕ್ತ ಯಾನಕ್ಕೆ ಮುಂಜಾಕರುಕತಾ ಕ್ರಮವಾಗಿಸಿ ಕೆಆರ್ಸಿಎಲ್ ಅತೀಯಾದ ಕಾಳಜಿ ವಹಿಸಿ ಸೂಕ್ಷ್ಮವಾದ ಜಾಗಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸುವಂತೆ, ಸಾಮಾನ್ಯ ಬೋಗಿಯ ಟಿಕೇಟು ಪಡೆದ ಪ್ರಯಾಣಿಕರು ಮೀಸಲು (ರಿಝರ್ವೇಶನ್) ಟಿಕೇಟು ಪಡೆದು ಪ್ರಯಾಣಿಸುವ ಭೋಗಿಗಳಲ್ಲಿ ಪ್ರಯಾಣಿಸದಂತೆ ಯಾ ಕನಿಷ್ಠ ರತ್ನಗಿರಿ ರೈಲು ನಿಲ್ದಾಣ ತನಕ ನುಗ್ಗದಂತೆ ಕ್ರಮಕೈಗೊಳ್ಳುವರೇ ಆರ್ಪಿಫ್ ಸಿಬ್ಬಂದಿ ನೇಮಕ ಮಾಡುವಂತೆ, ಮಂಗಳೂರು ಎಕ್ಸ್ಪ್ರೆಸ್ ರೈಲನ್ನು ಮೂಲ್ಕಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಹಾಗೂ ಪ್ರಯಾಣಿಕರ ಅನುಕೂಲಕರ ಸೇವೆಯಾಗಿಸಿ ನೂತನ (ರೇಕ್)ಗಳ ಅಳವಡಿಕೆ ಇತ್ಯಾದಿಗಳ ಬಗ್ಗೆ ಮನವಿ ಸಲ್ಲಿಸಲಾಯಿತು.
ಸುಮಾರು ಒಂದುವರೆ ತಾಸುಗಳ ಸುದೀರ್ಘವಾದ ವಿಸ್ತೃತ ಚರ್ಚೆಯ ಬಳಿಕ ಸಂಜಯ್ ಗುಪ್ತ ಭರವಸೆಗಳನ್ನು ತ್ವತರಿತವಾಗಿ ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ರೈಲ್ವೇ ಯಾತ್ರಿ ಸಂಘದ ಈ ಬೇಡಿಕೆಗಳನ್ನು ಶೀಘ್ರವೇ ಪರಿಶೀಲಿಸಿ ಸೂಕ್ತವಾದ ಕ್ರಮಕೈಗೊಳ್ಳುತ್ತಾ ಪ್ರಯಾಣಿಕರ ನೆಮ್ಮದಿದಾಯಕ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಕೆಆರ್ಸಿಎಲ್ ಸದಾ ಬದ್ಧವಾಗಿದೆ ಎಂದ ತಿಳಿಸಿದರು.