ವಿಟ್ಲ: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಆದರೂ ಶಾಲೆಗಳು ಮುಚ್ಚುವ ಭೀತಿ ಎದುರಾಗುತ್ತಿದೆ. ಊರಿನ ಮುಖ್ಯಸ್ಥರಿಂದ ಸರಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿದೆ. ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ನಾರ್ಶ ಮೈದಾನದ ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವಕಾಲೇಜಿನ ಪೌರ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ನಾರ್ಶ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾ ಸಂಸ್ಥೆ ಎಂಬುದು ಸರ್ವಧರ್ಮಗಳ ದೇಗುವಿದ್ದಂತೆ. ಇದು ಸರ್ಕಾರಿ ಶಾಲೆಯಲ್ಲ. ಇದು ನಮ್ಮ ಶಾಲೆ ಎಂಬ ಮನೋಭಾವದಿಂದ ಕೆಲಸ ನಿರ್ವಹಿಸಬೇಕು. ಇದರಿಂದ ಗ್ರಾಮದ ಶಾಲೆಗಳು ಉಳಿಯುತ್ತದೆ. ಸಿಂಗಾರಿ ಹಾಜಿ ಅವರ ಪರಿಶ್ರಮದಿಂದ ನಾರ್ಶ ಶಾಲೆ ಇಂದು ಉಳಿದುಕೊಂಡಿದೆ. ಶಾಸಕನ ನೆಲೆಯಲ್ಲಿ ಈ ಶಾಲೆಯ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ತಿಳಿಸಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಶಿಕ್ಷಣ ವ್ಯವಸ್ಥೆಯಲ್ಲಿ ವಾರ್ಷಿಕೋತ್ಸವ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತದೆ. ಹಲವು ಮಂದಿಗೆ ಶಿಕ್ಷಣ ನೀಡಿದ ಸಂಸ್ಥೆ ಇದಾಗಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಋಣ ತೀರಿಸುವ ಕೆಲಸ ಮಾಡುವ ಕೆಲಸ ಮಾಡಿದಾಗ ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಜಿ ಎನ್ ಸುಲೈಮಾನ್ ನಾರ್ಶ ಅವರನ್ನು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭ ಅವರು ನಾರ್ಶ ಶಾಲೆಯನ್ನು ದತ್ತು ಪಡೆಯುವುದಾಗಿ ಘೋಷಿಸಿದರು.
ಶಾಲಾ ಹಳೆ ವಿದ್ಯಾರ್ಥಿಗಳಾದ ಅನ್ಸಾರ್, ದೀಪಿಕ ಶೆಟ್ಟಿ, ಫಾತಿಮತ್ ಸುರಾಯ, ನವೀನ್, ಆರೀಫ್ ಕಲ್ಕಟ್ಟ, ಬಬಿತಾ, ಮಹಮ್ಮದ್ ಅಲ್ತಾಫ್, ಮಹಮ್ಮದ್ ಮುಸ್ತಫಾ, ಮಹಮ್ಮದ್ ಉನೈಸ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ರಾಜ್ಯ ಮಟ್ಟದಲ್ಲಿ ಸಾಧನೆಗೈದ ಕೀರ್ತನ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಸದಸ್ಯ ಕುಳ್ಯಾರು ನಾರಾಯಣ ರೈ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬೋಳಂತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ ರೈ, ಕೊಳ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎಚ್ ಅಬೂಕ್ಕರ್ ಸೆರ್ಕಳ, ಸುನಂದ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ದೇವಿಕಾ ಆರ್ ರೈ, ಎಸ್ಡಿಎಂಸಿ ಸದಸ್ಯ ದಾಮೋದರ ರೈ ಬಾರೆಬೆಟ್ಟು, ಸುರಿಬೈಲು ಸರಕಾರಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಎಸ್.ಎಂ ಅಬೂಕ್ಕರ್, ಬಾಲಕೃಷ್ಣ ಸೆರ್ಕಳ, ಲಕ್ಷ್ಮೀನಾರಾಯಣ ಬಳ್ಳುಕ್ಕುರಾಯ, ವೆಂಕಟರಮಣ ಬಳ್ಳುಕ್ಕರಾಯ, ಸಹಾಯಕ ಪ್ರಿನ್ಸಿಪಾಲ್ ಸಿಂಥಿಯಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಾಮಕೃಷ್ಣ ರಾವ್ ಸ್ವಾಗತಿಸಿದರು. ಪ್ರಿನ್ಸಿಪಾಲ್ ಸರಿತಾ ಸನ್ಮಾನ ಪತ್ರ ಓದಿದರು. ಗೋಪಾಲಕೃಷ್ಣ ನಿರೂಪಿಸಿದರು. ದೈಹಿಕ ಶಿಕ್ಷಕ ರಫೀಕ್ ಸಹಕರಿಸಿದರು.

