ಬಂಟ್ವಾಳ: ರಾಜ್ಯ ಸರಕಾರದ ಜನಮನ್ನಣೆ ಗಳಿಸಿದ ಶೈಕ್ಷಣಿಕ ಯೋಜನೆಗಳಾದ ಉಚಿತ ಬೈಸಿಕಲ್ ಮತ್ತು ಶೂ ವಿತರಣಾ ಸಮಾರಂಭವು ಮಂಚಿ ಕೊಳ್ನಾಡು ಪ್ರೌಢ ಶಾಲೆಯಲ್ಲಿ ಜರಗಿತು.
ಉಚಿತ ಬೈಸಿಕಲ್ನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಕೊಳ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಎಸ್. ಮಹಮ್ಮದ್ರವರು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದೆನ್ನುವ ಸರಕಾರದ ಕಾಳಜಿಯನ್ನು ಸದುಪಯೋಗಪಡಿಸಿಕೊಂಡು ಖಾಸಗಿ ಶಾಲೆಗಳ ಮಕ್ಕಳ ಜತೆ ಸರಿಸಾಟಿಯಾಗಿ ವಿದ್ಯಾಭ್ಯಾಸವನ್ನು ಪಡೆಯಬೇಕು ಎಂದರು.
ಉಚಿತ ಶೂವನ್ನು ವಿತರಿಸಿ ಮಾತನಾಢಿದ ತಾಲೂಕು ಪಂಚಾಯತ್ ಸದಸ್ಯರಾದ ನಾರಾಯಣ ಶೆಟ್ಟಿ ಕುಲ್ಯಾರು ಇವರು ಸರಕಾರದ ಯೋಜನೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೇಳವಣಿಗಗೆ ಕಾರಣವಾಗಬೇಕು. ವಿದ್ಯಾರ್ಥಿಗಳ ಪೋಷಕರು ಮಕ್ಕಳ ಬಗ್ಗೆ ವಿಶೇಷ ಅಸ್ಥೆ ವಹಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾರ್ಗದರ್ಶಕರಾಗಬೇಕು ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಶೈಕ್ಷಣಿಕ ಪ್ರಗತಿಯ ಜೊತೆಗೆ ಜೀವನ ಕೌಶಲ್ಯದ ವಿದ್ಯೆಯಲ್ಲಿಯೂ ಪಾರಂಗತರಾದಾಗ ಬದುಕಿನ ಪಥದಲ್ಲಿ ಯಶಸ್ವಿಯಾಗಿ ಗುರಿ ಕ್ರಮಿಸಬಹುದು ಎಂದರು.
ಮುಖ್ಯ ಅತಿಥಗಳಾಗಿ ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಐರಿನ್ ಡಿ ಸೋಜ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಶೋಕ ಶಿಂಗಾರಕೋಡಿ ಮತ್ತು ಲೋಕೆಶ್ ಬಂಢಾರಿ ಉಪಸ್ಥಿತರಿದ್ದರು.


ಶಾಲಾ ಮುಖ್ಯೋಪಾಧ್ಯಾಯರಾದ ವಿ. ಶ್ರೀರಾಮ ಮೂರ್ತಿ ಸ್ವಾಗತಿಸಿ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಪ್ರವೀಣ್ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲಾಶಿಕ್ಷಕ ವಿಶಾಂತ್ ಮಾರ್ಕ್ ಡಿ ಸೋಜ ವಂದಿಸಿ, ದೈಹಿಕ ಶಿಕ್ಷಕ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.












