ವಿಟ್ಲ: ಕಬಡ್ಡಿ ಸಾಮರಸ್ಯದ ಸಂಕೇತ. ಇದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಪುಂಡಿಕಾ ಹೇಳಿದರು.
ಅವರು ವಿಟ್ಲ ಸಮೀಪದ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಕೆಲಿಂಜ ಕೇಸರಿ ಫ್ರೆಂಡ್ಸ್ ಹಾಗೂ ಬಂಟ್ವಾಳ ತಾಲೂಕು ಅಮೆಚೂರು ಅಸೋಸಿಯೇಶನ್ನವರು ಅಟಲ್ ಬಿಹಾರಿ ವಾಜಪೇಯಿಯವರ ಸವಿನೆನಪಿಗಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ವಿಷ್ಣು ಭಟ್ ಅಡ್ಯೇಯಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ದೇಶಕ್ಕಾಗಿ ಬದುಕಿದ ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶವನ್ನು ನಾವು ಪಾಲಿಸಿಕೊಂಡು ಬರಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿಟ್ಲ ಪ್ರಖಂಡ ಬಜರಂಗದಳ ಸಂಚಾಲಕ ಅಕ್ಷಯ ರಜಪೂತ್ ಕಲ್ಲಡ್ಕ, ಊರಿನ ಪ್ರಮುಖರಾದ ಗಿರಿಯಪ್ಪ ಗೌಡ ಅಡ್ಯೇಯಿ, ಸಂತೋಷ್ ಶೆಟ್ಟಿ ಶೀನಾಜೆ, ನಾಗರಾಜ ವಿಟ್ಲ ಮೆಸ್ಕಾಂ, ಪದ್ಮನಾಭ ಗೌಡ ಅಡ್ಯೇಯಿ, ಕೇಸರಿ ಫ್ರೆಂಡ್ಸ್ ಅಧ್ಯಕ್ಷ ಸಂದೀಪ್ ನಗ್ರಿಮೂಲೆ ಉಪಸ್ಥಿತರಿದ್ದರು.
ಬೆಳಗ್ಗೆ ನಡೆದ ಸಮಾರೋಪ ಸಮಾರಂಭದಲ್ಲಿ ನಾರಾಯಣ ರೈ ಕಲ್ಮಲೆ ಅವರು ಅಧ್ಯಕ್ಷತೆ ವಹಿಸಿ, ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಕೊರಗಪ್ಪ ಗೌಡ ಅಡ್ಯೇಯಿ, ರತ್ನಾಕರ ಪೂಜಾರಿ ಮಾಡದಾರ್, ಜಗನ್ನಾಥ ಶೆಟ್ಟಿ ಕಂಪದಬಲು, ಶಿವಪ್ಪ ಪೂಜಾರಿ ಪೆಲತ್ತಡ್ಕ, ಸಂಜೀವ ಗೌಡ ಅಡ್ಯೇಯಿ, ಅನಂತೇಶ ಪಾಲ್ತಿಮಾರ್ ಮತ್ತಿತರರು ಭಾಗವಹಿಸಿದ್ದರು.
ಕೇಸರಿ ಫ್ರೆಂಡ್ಸ್ನ ಪ್ರಶಾಂತ್ ಪಾಲ್ತಿಮಾರ್ ಸ್ವಾಗತಿಸಿ, ತೀರ್ಥೇಶ್ ಮಾಡದಾರ್ ವಂದಿಸಿದರು. ಉದಯ ಸಾಲ್ಯಾನ್ ನಗ್ರಿಮೂಲೆ ನಿರೂಪಿಸಿದರು.
ಪಂದ್ಯಾಟದಲ್ಲಿ ಒಟ್ಟು ೩೨ ತಂಡಗಳು ಭಾಗವಹಿಸಿದ್ದು, ಪೆರುವಾಯಿ ಹನುಮಾನ್ ಫ್ರೆಂಡ್ಸ್ ಪ್ರಥಮ, ಕಲ್ಪಣೆ ೭ ಸ್ಟಾರ್ಸ್ ದ್ವಿತೀಯ, ಕೇಪು ತುಳುನಾಡು ಫೈಟರ್ಸ್ ತೃತೀಯ ಹಾಗೂ ಕೆಲಿಂಜ ಕೇಸರಿ ಫ್ರೆಂಡ್ಸ್ ಚತುರ್ಥ ಸ್ಥಾನವನ್ನು ಗಳಿಸಿದರು.

