ಬಿರು ಬಿಸಿಲ ಲೆಕ್ಕಿಸದೆ
ಬೆನ್ನ ಹಂದರದಿ ಹಾಯಾಗಿ
ನಿದ್ರಿಸಲು ಕಂದ….
ಭೂಮಾತೆಯ ಒಡಲಲಿ
ಬಿತ್ತುತ್ತಿರಲು ಬೀಜವನು
ಕವಲೊಡೆಯಲದು ಆನಂದ….

ಹಸಿದ ಹೊಟ್ಟೆಯಲಿ
ಉಕ್ಕುವ ಬಿಕ್ಕಳಿಕೆಗೆ
ತನುವು ಸೊರಗಿದೆ….
ಹೊತ್ತ ಸಂಸಾರದ ನೊಗ
ಎಳೆಯಲದು ತೋಳುಗಳು
ಮಂಡಿಗೆ ತಿನ್ನುತ್ತಿದೆ….
ಪುಡಿಗಾಸಿಲ್ಲ ಹಿಡಿಮುಷ್ಟಿಯಲಿ
ಕೂಳಿಲ್ಲದೆ ಬರಿದಾಗಿದೆ
ಬಾಳ ಜೋಳಿಗೆ….
ಹುಟ್ಟಿಸಿದ ದೇವನು
ಹುಲ್ಲು ಮೇಯಿಸನು
ಹುಲ್ಲುಕಡ್ಡಿ ಆಸರೆಯೆನಗೆ….
ಬಡತನವು ರಚ್ಚೆ ಹಿಡಿದು
ಕಚ್ಚುತ ಸಾರ ಹೀರಿದೆ
ಬದುಕಿನಲಿ….
ದಳ್ಳುರಿಯ ದಹಿಸಿ
ಫಲರೂಪದಿ ಆರ್ವಿಭವಿಸು
ಸತ್ವಭರಿತ ವಸುಧೆಯಲಿ….
ಹಿಡಿ ಅನ್ನಕ್ಕಾಗಿ
ಅನ್ಯರ ಮನೆಬಾಗಿಲಿಗೆ
ಕರ ತಟ್ಟಲಾರೆನು….
ಕೈಯದು ಕೆಸರಾಗಿ
ಬೆಣ್ಣೆಯು ಒಸರುವುದು
ಕಡೆದಾಗ ಮೊಸರನು….
ಕಲ್ಲು ಮುಳ್ಳಿನ
ಹಾದಿಯದು ಮುದವೆನಿಸಿದೆ
ಅಂಬಲಿಯ ಆಸೆಯಲಿ….
ತೆನೆ ತುಂಬಿ
ತೂಗಲು ಪಚ್ಚೆ ಪೈರು
ಹರುಷವದು ಮುಖಾರವಿಂದದಲಿ….

@ ತುಳಸಿ ಕೈರಂಗಳ್ @

