ಎರವಲು ಪಡೆದಂತೆ ಎರಗುತಿದೆ ಕರುನಾಡ ತುಂಬೆಲ್ಲಾ ಕೊರೋನಾ….
ಆರ್ಭಟದ ಕೆನ್ನಾಲಿಗೆಯ ಆರಿಸಲು ಅರಸುತಿದೆ ತಾಯ್ನಾಡು ದಾರೀನಾ….

ಊಹೆಗೂ ನಿಲುಕದ ವೂಹಾನ್ ನೆಂಟನ ಮರಣ ಮೃದಂಗ….
ರುದ್ರ ರೌದ್ರತೆಯ ದುಂದುಭಿಯಲಿ ಜಗವಾಗಿದೆ ದಾರವಿರದ ಪತಂಗ….
ಮದವೇರಿದ ಗಜದಂತೆ ರಾಜಗಾಂಭೀರ್ಯದಿ
ಬಂದ ಮಾಯಾರೂಪಿಯ ತಲ್ಲಣ….
ಮನುಜನ ಜೀವನ ಯಾತ್ರೆ ಬೆಂದು ನರಳಿದ ರೂಪವದು ವಿಲಕ್ಷಣ…
ತೂಗಿ ನೋಡಲು ತೂಗದು ತೂಗು ತಕ್ಕಡಿಯಲಿ ಭಾರವಿಲ್ಲ!….
ಹೊರಿಸಿದ ತೂಕವ ಹೊರಲು ಜೀವ ಜಂತುಗಳ ಕಾಯದಿ ಬಲವಿಲ್ಲ..
ವೈರಾಣುವಿನ ಮೈಲಿಗೆಯ ಕೊಚ್ಚೆಯಲಿ
ಬಿದ್ದು ತತ್ತರಿಸಿದ ಕಾಲವಿದು….
ಲೋಕವ ಕಾಡುವ ಕಂಟಕವ ತೊಲಗಿಸಿ ಮಡಿ ಮೀಯಿಸು ನೀನೆಂದು….
ಮೊರೆಯದು ನಿನಗರ್ಪಿಸುವೆ ಮೋರೆಯಲಿ
ದುಗುಡವ ಕಾಣಲಾರೆಯಾ ಕರುಣಾಸಿಂಧು…
ಧಮನಿ ಧಮನಿಯಲಿ ಸೇರ ಹಂಬಲಿಸುವ
ಅಣುವ ದಮನಿಸು ನೀ ದೀನಬಂಧು….
@ ತುಳಸಿ ಕೈರಂಗಳ್@

