ಹಗ್ಗ ಕಿತ್ತುಕೊಂಡೇ ಬಂದಿರುವೆ
ಬಾರೊ ಜೀವದ ಗೆಳೆಯ
ಬೇಗ ಬಿಟ್ಟೋಡೋಣ ಬಾ
ಹುಡುಕಿ ಬೇರೊಂದು ಇಳೆಯ

ಆ ಶಿವನ ಒಳಗಿಟ್ಟು
ನಿನ್ನ ಬಯಲಲಿ ಬಿಟ್ಟು
ಎಲ್ಲೆಂದರಲ್ಲಿ ಎತ್ತಿಟ್ಟರೂ
ನಿನಗೇಕೆ ಇಲ್ಲ ಹೇಳು ಸಿಟ್ಟು?
ಎಲ್ಲೆಲ್ಲಿಯೋ ಅಲೆದು ಅದಾವುದೋ
ಯಂತ್ರ ತಂದಿರುವರಂತೆ
ಬೀಜ ಸಿಗಿದು ಹರೆಯ ಕೊರೆದ
ಧಣಿಗೇ ನಾನೀಗ ಬೇಡವಂತೆ
ಸುಖಿಸಿದರು ತಾವು ದುಡಿತ
ಬಡಿತವನೆಲ್ಲ ನನ್ನ ಮೈಗೇರಿಸಿ
ದುಡ್ಡು ಮಾಡಿಕೊಳುವರಂತೆ
ಈಗ ಕಸಾಯಿಖಾನೆಗೆ ಸೇರಿಸಿ
ಜೀವವಿಲ್ಲದಿದ್ದರೂ ನಿನ್ನನಿವರು
ಸುಮ್ಮನೆ ಬಿಡುವುದಿಲ್ಲ ಬಾರೋ
ಹೊರಗಿಟ್ಟರೂ ಬಿಡದೆ ಹುಡಿ
ಗುಟ್ಟುವರು ವೇಗ ತೋರೋ

#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರವೃತ್ತ
ಜಮಖಂಡಿ – 587301