ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಕಾರಿಂಜ ದರ್ಖಾಸು ಎಂಬಲ್ಲಿ ಸರಕಾರಿ ಜಮೀನನ್ನು ಅತಿಕ್ರಮಣವಾಗಿರುವುದನ್ನು ತೆರವುಗೊಳಿಸಿ ಪ.ಜಾತಿ ಮತ್ತು ಪಂಗಡದ ವರಿಗೆ ನಿವೇಶನಕ್ಕಾಗಿ ಕಾದಿರಿಸುವಂತೆ ಸ್ಥಳೀಯ ನಿವಾಸಿಗಳಾಗ ಸುಂದ ಮುಗೇರ,ಜನಾರ್ದನರವರು ಆಗ್ರಿಹಿಸಿದ್ದಾರೆ.


ಮಂಗಳವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಬಗ್ಗೆ ಬಂಟ್ವಾಳ ತಹಶೀಲ್ದಾರರಿಗೂ ಮನವಿ ಸಲ್ಲಿಸಲಾಗಿದೆ ಎಂದರು.
ಕಾವಳಪಡೂರು ಗ್ರಾಮದ ಸ.ನಂ.190/1 ರಲ್ಲಿ1.60 ಎಕ್ರೆ ಜಮೀನು ಇಲ್ಲಿನ ದಿನೇಶಗೌಡ ಎಂಬವರಿಗೆ ಅಕ್ರಮ – ಸಕ್ರಮದಲ್ಲಿ ಮಂಜೂರಾಗಿದ್ದು, ಅದೇ ಸ.ನಂಬರನಲ್ಲಿ 2.34 ಎಕ್ರೆ ಉಳಿಕೆಯಾಗಿತ್ತು.ಇದೀಗ ದಿನೇಶಗೌಡ ಅವರು ತನಗೆ ಮಂಜೂರಾದ ಮತ್ತು ಉಳಿಕೆ ಜಮೀನನ್ನು ಖಾಸಗಿ ವ್ಯಕ್ತಿಯೋರ್ವರಿಗೆ ಮಾರಾಟ ಮಾಡಲಾಗಿದ್ದು, ಅದರ ಸುತ್ತು ಬೇಲಿ ನಿರ್ಮಿಸಿ ಅತಿಕ್ರಮಣಗೊಳಿಸಲಾಗಿದೆ ಎಂದು ಅಪಾದಿಸಿರುವ ಸುಂದರ ಮುಗೇರ ಮತ್ತು ಜನಾರ್ದನ ಅವರು ಈ ಉಳಿಕೆ 2.34 ಜಮೀನನ್ನು ಅತಿಕ್ರಮಣ ಜಮೀನನ್ನು ತೆರವುಗೊಳಿಸಿ ಇಲ್ಲಿರುವ ನಿವೇಶನ ರಹಿತ ಎಸ್ .ಸಿ.,ಎಸ್.ಟಿ.ಬಡ ಕುಟುಂಬಗಳಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.
8 ತಿಂಗಳ ಹಿಂದೆಯೇ ಈ ಬಗ್ಗೆ ಸ್ಥಳೀಯ ಗ್ರಾ.ಪಂ.,ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದರೂ ಅವರು ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಸರಕಾರಿ ಖಾಲಿ ಜಮೀನಿನಲ್ಲಿ ನಿವೇಶನ ರಹಿತ ಎಸ್ಸಿ ಕುಟುಂಬಗಳು ಡೇರೆ ಹಾಕಿ ಕುಳಿತಾಗ ಕಾನೂನು ಕ್ರಮ ಜರಗಿಸುವ ಎಚ್ಚರಿಕೆ ನೀಡಿ ಅಲ್ಲಿಂದ ತೆರವುಗೊಳಿಸಿರುವ ಗ್ರಾಮಕರಣಿಕರು,ಇದೀಗ ಖಾಸಗಿ ವ್ಯಕ್ತಿಯೋರ್ವರು ಸರಕಾರಿ ಜಮೀನನ್ನು ಅತಿಕ್ರಮಿಸಿದಾಗ ಗ್ರಾಮ ಪಂಚಾಯತ್ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ತಹಶೀಲ್ದಾರರು ಕೂಡ ತಮ್ಮ ಮನವಿ ಸ್ವೀಕರಿಸಿ,ಸಮಸ್ಯೆ ಆಲಿಸುವ ಕನಿಷ್ಠ ಸೌಜನ್ಯವನ್ನು ತೋರಿಲ್ಲ ಎಂದು ಸುಂದರ ಹಾಗೂ ಜನಾರ್ದನ ಅವರು ಆರೋಪಿಸಿದ್ದು, ಈ ಜಮೀನು ಒತ್ತುವರಿಯನ್ನು ತೆರವುಗೊಳಿಸಿ ನಿವೇಶನರಹಿತ ಎಸ್ಸಿ,ಎಸ್ಟಿ ಸಮುದಾಯಕ್ಕೆ ಹಂಚಿಕೆ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.ಇಲ್ಲವೇ ಲೋಕಾಯಕ್ತರ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠೊಯಲ್ಲಿ ನಿತಿನ್ ಉಪಸ್ಥಿತರಿದ್ದರು.

