ಬಂಟ್ವಾಳ: ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿರುವ ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಸಂಘ ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಆಯ್ಕೆಗೆ ಜ.24 ರಂದು ನಡೆಯಬೇಕಾಗಿದ್ದ ಚುನಾವಣೆಗೆ ಸಂಘದ ಉಪನಿಯಮಗಳ ಪ್ರಕಾರ ಸ್ಪರ್ಧಿಸಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು ಸರಿ ಸಮಾನರಾಗಿರುವುದರಿಂದ ಅವಿರೋಧವಾಗಿ ಈ ಆಯ್ಕೆ ನಡೆಸಲಾಗಿದೆ ಎಂದು ಜ.18 ರಂದು ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಅವರು ಘೋಷಿಸಿದ್ದಾರೆ.
ಒಟ್ಟು 12 ಸ್ಥಾನಗಳಿಗೆ ಸಂಘದ ಹಾಲಿ ಅಧ್ಯಕ್ಷ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಅವರ ನೇತೃತ್ವದ ಸಂಗಳು ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ. ಸಹಕಾರಿ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಅವರ ಮಾರ್ಗದರ್ಶನದಲ್ಲಿ ಇದುವರೆಗೂ ಇಲ್ಲಿ ಕಾಂಗ್ರೆಸ್ ಬೆಂಬಲಿತರು ಆಡಳಿತ ನಡೆಸುತ್ತಿದೆ ಎಂದು ಬಿ. ಪದ್ಮಶೇಖರ ಜೈನ್ ಅವರು ತಿಳಿಸಿದ್ದಾರೆ.
ಸಾಲಗಾರ ಸಾಮಾನ್ಯ ಸ್ಥಾನದಿಂದ ಬಿ.ಪದ್ಮಶೇಖರ ಕುಮಾರ್, ಹೇಮಂತ ಕುಮಾರ್, ದಯಾನಂದ ಶೆಟ್ಟಿ, ಪ್ರಮೋದ್ ಕುಮಾರ್, ನಾರಾಯಣ ಶೆಟ್ಟಿ, ಹಿಂದುಳಿದ ವರ್ಗದಿಂದ ಶ್ವನಾತ ಪೂಜಾರಿ, ಮಹಮ್ಮದ್ ಸಾಲಿಯಾ, ಮಹಿಳಾ ಸ್ಥಾನದಿಂದ ಗಾಯತ್ರಿ ಅರುಣ್, ರೇವತಿ, ಪ.ಜಾತಿ ಸ್ಥಾನದಿಂದ ಉಮಣ, ಪ. ಪಂಗಡದಿಂದ ಕೃಷ್ಣ ನಾಯ್ಕ, ಸಾಲಗಾರರಲ್ಲದ ಸ್ಥಾನದಿಂದ ಚಂದ್ರಹಾಸ ಅವರು ಆಯ್ಕೆಯಾಗಿದ್ದಾರೆ.
ರಿಟರ್ನಿಂಗ್ ಅಧಿಕಾರಿ, ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿ ನಾಗೇಂದ್ರ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬಂದಿ ವರ್ಗ ಸಹಕರಿಸಿದರು.

