ಬಂಟ್ವಾಳ: ಬೆಂಗಳೂರು ಅಂತರ್ಜಲ ನಿರ್ದೇಶನಾಲಯ ಹಾಗೂ ಮಂಗಳೂರು ಜಿಲ್ಲಾ ಅಂತರ್ಜಲ ಕಚೇರಿ ಇವರ ವತಿಯಿಂದ ಮಳೆ ನೀರಿನ ಸಂಗ್ರಹಣೆ ಮತ್ತು ಮರುಬಳಕೆ , ಅಂತರ್ಜಲ ಸಂರಕ್ಷಣೆ , ಕಲುಷಿತ ತಡೆಗಟ್ಟುವಿಕೆ, ತೆರೆದ/ತ್ಯಕ್ತ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾಟರ್ ಮ್ಯಾನ್ ರವರಿಗೆ ಒಂದು ದಿನದ ಕಾರ್ಯಗಾರ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಂದ್ರಹಾಸ ಕರ್ಕೇರ ಮಳೆ ನೀರನ್ನು ಸಂರಕ್ಷಣೆ ಮಾಡಿ ಆ ಮೂಲಕ ಅಂತರ್ಜಲ ವೃದ್ದಿ ಮಾಡಲು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದರು. ಅಧಿಕಾರಿಗಳು ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಿ, ಬೇರೆ ಬೇರೆ ಕಾರ್ಯಕ್ರಮ ಗಳ ಮೂಲಕ ಜನಜಾಗ್ರತಿ ಮಾಡಿ ಎಂದು ಅವರು ಹೇಳಿದರು.


ಅಂತರ್ಜಲ ಮಿತಬಳಕೆ , ಸದ್ಬಳಕೆ ಯ ಬಗ್ಗೆ ಪ್ರತಿಯೊಬ್ಬರು ಪಣತೊಡಬೇಕು ಎಂದು ತಿಳಿಸಿದರು. ಬಂಟ್ವಾಳ ತಹಶಿಲ್ದಾರರಾದ ರಶ್ಮಿ ಮಾತನಾಡಿ ಅಂತರ್ಜಲದ ಅಭಿವೃದ್ಧಿಯ ಮಹತ್ವವನ್ನು ಅಧಿಕಾರಿಗಳು ಇತರರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ.
ನೀರಿನ ಸಮಸ್ಯೆ ತಡೆಯಲು ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ, ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿ ಬೇಕಾಗಿದೆ. ಇಂತಹ ಕಾರ್ಯಕ್ರಮಗಳು ಪ್ರತಿಯೊಬ್ಬರಿಗೆ ಮುಟ್ಟುವ ರೀತಿಯಲ್ಲಿ ಆಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ವಹಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ರಾಜಣ್ಣ, ಸಹಾಯಕಕಾರ್ಯಪಾಲ ಅಭಿಯಂತರ ಕೃಷ್ಣ ಕುಮಾರ್, ಉಡುಪಿ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಡಾ! ಎಂ ದಿನಕರ ಶೆಟ್ಟಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನೋಣಯ್ಯ ನಾಯಕ್ , ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಮಚಂದ್ರ , ಸಂಪನ್ಮೂಲ ವ್ಯಕ್ತಿ ಪ್ರೋ. ಜಗದೀಶ್ ಬಾಳ, ಜಿಲ್ಲಾ ಅಂತರ್ಜಲ ಕಚೇರಿ ಯ ಹಿರಿಯ ಭೂವಿಜ್ಞಾನಿ ಜಾನಕಿ ಪಿ.
ಮತ್ತಿತರ ರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂತರ್ಜಲ ಮಾಹಿತಿಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ನಿತೇಶ್ ಡಿ.ಸೋಜ ಸ್ವಾಗತಿಸಿ, ಚಂದ್ರಿಕಾ ವಂದಿಸಿದರು.