ಬಂಟ್ವಾಳ: ಬಂಟ್ವಾಳ ತಾಲೂಕಿನ ಬಂಟ್ವಾಳ ಕಸಬಾ ಗ್ರಾಮದಲ್ಲಿರುವ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರವನ್ನು ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಜ.20ರಂದು ಬಾಲಾಲಯ ಪ್ರತಿಷ್ಠೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ನಡೆಯಲಿದೆ.
ಜ.19ರಂದು ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿದ್ದು ಜ. 20ರಂದು ಬೆಳಿಗ್ಗೆ ಗಂಟೆ 8-32ಕ್ಕೆ ಒದಗುವ ಕುಂಭಲಗ್ನದಲ್ಲಿ ಶ್ರೀ ಮಹಮ್ಮಾಯಿ ದೇವರ ಬಾಲಾಲಯ ಪ್ರತಿಷ್ಠೆ, ಐಕ್ಯಮತ್ಯ ಹೋಮ ಮತ್ತು 108 ಕಾಯಿ ಗಣಯಾಗ ನಡೆಯಲಿದೆ.
ಮಧ್ಯಾಹ್ನ ಗಂಟೆ 11 ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಕನ್ಯಾಡಿ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶ್ರೀರ್ವಚನ ನೀಡುವರು. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ದೀಪ ಪ್ರಜ್ವಲನ ಮಾಡುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸುವರು. ಜ್ಯೋತಿಷ್ಯ ವಿದ್ವಾನ್ ಸತೀಶ್ ಪಣಿಕ್ಕರ್, ಪುರೋಹಿತರಾದ ಕೇಶವ ಶಾಂತಿ ನಾಟಿ, ಉಧ್ಯಮಿ ಸಂತೋಷ್ ಕುಮಾರ್ ಕೊಟ್ಟಿಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ್, ಪುರಸಭಾ ಸದಸ್ಯರಾದ ವಾಸು ಪೂಜಾರಿ ಲೊರೆಟ್ಟೊ, ಮೀನಾಕ್ಷಿ, ಗಂಗಾಧರ ಪೂಜಾರಿ, ಜನಾರ್ಧನ ಚೆಂಡ್ತಿಮಾರು, ದೇವಕಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.
ಪುನರ್ನಿರ್ಮಾಣ ಸಂಕಲ್ಪ:
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಂಟ್ವಾಳ ಕಸಬಾ ಗ್ರಾಮದ ಕಾರಂಬಡೆ ಎಂಬಲ್ಲಿರುವ ಪ್ರಕೃತಿ ರಮಣೀಯ ಹಚ್ಚಹಸಿರ ಸುಂದರ ಪರಿಸರದಲ್ಲಿರುವ ಶ್ರೀ ಮಹಮ್ಮಾಯಿ ಕ್ಷೇತ್ರವು ಊರ-ಪರವೂರ ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಶ್ರೀ ಮಹಾಮ್ಮಾಯಿಯೊಂದಿಗೆ ಶ್ರೀ ಗಣಪತಿ ದೇವರು, ಶ್ರೀ ಗುರು, ಶ್ರೀ ನಾಗಬ್ರಹ್ಮ, ರಕ್ತೇಶ್ವರೀ, ಗುಳಿಗ, ಮಹಾಮ್ಮಾಯಿ ಗುಳಿಗ, ಕಾಲಭೈರವ, ಕಲ್ಲುರ್ಟಿ, ಪಂಜುರ್ಲಿ, ಧೂಮಾವತಿ, ಬಂಟ, ಮಾಡಕೊರತಿ, ಕುಪ್ಪೆಟ್ಟು ಪಂಜುರ್ಲಿ, ಮಂತ್ರದೇವತೆ, ಸತ್ಯದೇವತೆ, ಸಂಕೊಲೆ ಗುಳಿಗ, ರಾಹುಗುಳಿಗ, ಕೊರಗಜ್ಜ ಮೊದಲಾದ ದೈವಗಳ ಸಾನಿಧ್ಯವಿದೆ. ಸಿಡುಬು ಮೊದಲಾದ ಅಂಟುರೋಗಗಳು, ಜಾನುವಾರು ರೋಗಗಳು, ಕಷ್ಟಕಾರ್ಪಣ್ಯಗಳ ನಿವಾರಣೆ ಸಹಿತ ವಿವಾಹ ಸಂಬಂಧ, ಸಂತಾನ ಭಾಗ್ಯ ಕೂಡಿ ಬರುವರೇ ಭಕ್ತಾದಿಗಳು ಈ ಕ್ಷೇತ್ರಕ್ಕೆ ಹರಕೆ ಸಲ್ಲಿಸಿ ತಮ್ಮ ಇಷ್ಠಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ. ದೇವಿಗೆ ನಿತ್ಯ ಪೂಜೆ, ವಿಶೇಷ ಪೂಜೆಗಳು, ಕಾಳಬೈರವನಿಗೆ ಕೋಳಿ-ಕುರಿ ಬಲಿಗಳ ಸೇವೆ, ಮಹಾನವಮಿಯ ಒಂಬತ್ತು ದಿನ ವಿಶೇಷ ಉತ್ತವ, ಮಾರಿಪೂಜೆ, ರಾಶಿಪೂಜೆಗಳು ವಿಧಿವತ್ತಾಗಿ ನಡೆದುಕೊಂಡು ಬರುತ್ತಿದೆ.
ಇದೀಗ ಕ್ಷೇತ್ರದಲ್ಲಿ ನಡೆದಿರುವ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ಕ್ಷೇತ್ರವು ೮೦೦ ವರ್ಷಗಳ ಇತಿಹಾಸವಿರುವ ಅತ್ಯಂತ ಪುರಾತನವಾದ ಕಾರಣೀಕ ಕ್ಷೇತ್ರವಾಗಿದ್ದು ಶಿಥಿಲಾವಸ್ಥೆಯಲ್ಲಿರುವ ಈ ಕ್ಷೇತ್ರವನ್ನು ಪುನರ್ನಿರ್ಮಿಸಿ ಪ್ರತಿಷ್ಠೆ, ಬ್ರಹ್ಮಕಲಶಾಧಿಗಳನ್ನು ನಡೆಸಿ, ವಿಧಿವತ್ತಾಗಿ ಪೂಜೆ, ಉತ್ಸವಾದಿಗಳನ್ನು ನಡೆಸಿಕೊಂಡು ಬಂದಲ್ಲಿ ಊರಿಗೆ ಕ್ಷೇಮವಾಗುವುದಲ್ಲದೆ ಊರಪರವೂರ ಭಕ್ತಾದಿಗಳ ಸಂಕಷ್ಟಾದಿಗಳು ಪರಿಹಾರಗೊಂಡು ಸಕಲ ಸೌಭಾಗ್ಯಗಳು ಕೂಡಿಬರುವುದೆಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಇದೀಗ ಊರವರು ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿ ಶ್ರೀ ಮಹಾಮ್ಮಾಯಿ ಅಮ್ಮನವರಿಗೆ ನೂತನ ದೇವಸ್ಥಾನ ನಿರ್ಮಾಣ ಸಹಿತ ಪರಿವಾರ ದೈವದೇವರುಗಳಿಗೆ ಸಾನಿಧ್ಯವನ್ನು ನಿರ್ಮಿಸಲು ಸಂಕಲ್ಪಿಸಲಾಗಿದೆ. ಕ್ಷೇತ್ರದ ಪುನರ್ನಿರ್ಮಾಣ ಸಹಿತ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ೨.೫ಕೋಟಿ ರೂಪಾಯಿ ಖರ್ಚಾಗಬಹುದೆಂದು ಅಂದಾಜಿಸಲಾಗಿದ್ದು ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನಡೆಯುವರೇ ಭಕ್ತಾದಿಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ.
ಅರುಣ್ ಕುಮಾರ್ ಆಡಳಿತ ಮೊಕ್ತೇಸರರಾಗಿ, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಮತ್ತು ಕೇಶವ ಶಾಂತಿ ನರಿಕೊಂಬು ಗೌರವಾಧ್ಯಕ್ಷರುಗಳಾಗಿ, ಹರೀಶ್ ಕೋಟ್ಯಾನ್ ಕುದನೆ ಮಡಿವಾಳಬೆಟ್ಟು ಅಧ್ಯಕ್ಷರಾಗಿ, ನಾಗೇಶ್ ದರ್ಬೆ ಪ್ರಧಾನ ಕಾರ್ಯದರ್ಶಿಯಾಗಿ, ಜಯಶಂಕರ ಕಾನ್ಸಾಲೆ ಕೋಶಾಧಿಕಾರಿಯಾಗಿರುವ ಜೀರ್ಣೋದ್ಧಾರ ಸಮಿತಿ, ಕೊರಗಪ್ಪ ಕೊಲಂಬೆಬೈಲು ಅಧ್ಯಕ್ಷರಾಗಿರುವ, ಕೇಶವ ಪಾಲಡ್ಕ ಕೋಶಾಧಿಕಾರಿಯಾಗಿರುವ ಶ್ರೀ ಮಹಮ್ಮಾಯಿ ಕ್ಷೇತ್ರ ಪ್ರತಿಷ್ಠಾನ ಹಾಗೂ ಭಕ್ತವೃಂದ ಪುನರ್ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಅರುಣ್ ಕುಮಾರ್
ಆಡಳಿತ ಮೊಕ್ತೇಸರರು
ಹರೀಶ್ ಕೋಟ್ಯಾನ್ ಕುದನೆ
ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ