ವಿಟ್ಲ: ಒಂದು ಸ್ಪಷ್ಟ ಉದ್ದೇಶದಿಂದ ಭಗವಂತ ನಮಗೆ ಜನ್ಮ ನೀಡಿ ಕಳುಹಿಸಿದ್ದು, ನಾವು ಮಾಡಬೇಕಾದ ಕರ್ತವ್ಯವದಿಂದ ವಿಮುಖವಾಗಬಾರದು.
ನಿಯಮಬದ್ಧವಾದ ಸುಂದರ ಬದುಕಿನ ಸೂತ್ರವನ್ನು ಶ್ರೀ ಭಾಗವತ ಅತ್ಯಂತ ಸೂಚ್ಯವಾಗಿ ತಿಳಿಸುತ್ತದೆ ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶ್ರೀ ಮಹಾಬಲ ಸ್ವಾಮೀಜಿ ನುಡಿದರು.
ಅವರು ಶ್ರೀ ಕ್ಷೇತ್ರದಲ್ಲಿ ನಡೆದ ಶ್ರೀ ಭಾಗವತ ಸಪ್ತಾಹ ಪ್ರವಚನ ಕಾರ್ಯಕ್ರಮದ ಸಮಾಪನದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಭಾಗವತದ ಪ್ರವಚನಕಾರರಾಗಿ ಭಾಗವಹಿಸಿದ ಹಿರಿಯ ಧಾರ್ಮಿಕ ಚಿಂತಕ ಕೆಯ್ಯೂರು ನಾರಾಯಣ ಭಟ್ ಶ್ರೀ ಭಾಗವತವನ್ನು ಶ್ರವಣ ಮಾಡುವುದರೊಂದಿಗೆ ಅದರ ಒಳತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕರೋಪಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಘ್ನೇಶ್ವರ ಭಟ್ ಅನೆಯಾಲ, ಪತ್ರಕರ್ತ ವಿಷ್ಣುಗುಪ್ತ ಪುಣಚ ಭಾಗವಹಿಸಿದ್ದರು.
ಶ್ರೀ ಮಾತಾ ಮಾತೃ ಸೇವಾ ಸಮಿತಿಯ ಲಲಿತ, ನೋವೆಲ್ ಡಿಸೋಜ, ಸವಿತಾ ಅನಿಸಿಕೆ ವ್ಯಕ್ತಪಡಿಸಿದರು. ನಾಗರಾಜ ಕಣಿಯೂರು, ನವೀನ್, ದೀಕ್ಷಿತ್, ಶ್ರೀ ಮಾತಾ ಮಹಿಳಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕ ಚಂದ್ರಶೇಖರ್ ಕಣಿಯೂರು ಸ್ವಾಗತಿಸಿದರು. ರೇಣುಕಾ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.


