ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಮಕ್ಕಳ ಕಲಿಕೆ, ಶಿಸ್ತು, ಸಂಸ್ಕೃತಿ ಹಾಗೂ ಸಂಸ್ಕಾರವು ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರು ಆಗುವುದು ಖಂಡಿತ. ಇಂತಹ ಸಂಸ್ಥೆಯಲ್ಲಿ ಶಿಕ್ಷಣ ಕಲಿಯುವುದು ಭಾಗ್ಯ. ಇಂತಹ ಅತ್ಯುತ್ತಮ ಶಾಲೆಗೆ ನನ್ನ ಸಹಕಾರ ಎಂದೆಂದೂ ನೀಡುತ್ತೇನೆ ಎಂದು ಬೆಂಗಳೂರಿನ ಹೈಕೋರ್ಟ್ ನ್ಯಾಯವಾದಿ ರಾಜಶೇಖರ್ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ 2018-19ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಣ ಎಂಬುದು ಮಗುವಿಗೆ ವಿದ್ಯೆಯೊಂದಿಗೆ ವಿನಯ, ಸಂಸ್ಕಾರ ನೀಡುವಂತಹ ದೇಗುವಲವಾಗಬೇಕು. ಇಂತಹ ಸಂಸ್ಕಾರಯುತ ಶಿಕ್ಷಣ ನೀಡಿ ದೇಶಕ್ಕೆ ಉತ್ತಮ ಪ್ರಜೆಯನ್ನು ಶ್ರೀರಾಮ ವಿದ್ಯಾಕೇಂದ್ರ ಮಾತ್ರ ನೀಡಲು ಸಾಧ್ಯ ಎಂದು ಸಂಸ್ಕಾರ ಭಾರತಿ ಮಂಗಳೂರು ಇದರ ಅಧ್ಯಕ್ಷರು, ’ಯಕ್ಷಧ್ರುವ ಪಟ್ಲ’ ಪೌಂಡೇಶನ್ ಇದರ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಇವರು ವಿದ್ಯಾರ್ಥಿಗಳನ್ನುದ್ದೇಶೀಸಿ ಮಾತನಾಡಿದರು.
ಕರ್ನಾಟಕ ಮೊಗೇರ ಸಂಘದ ಮಾಜಿ ವಲಯಾಧ್ಯಕ್ಷರು, ಭಾರತೀಯ ಜೀವ ವಿಮಾ ನಿಗಮ ಬಿ.ಸಿ.ರೋಡ್ ಬಂಟ್ವಾಳ ಶಾಖೆಯ ಉಪ ವ್ಯವಸ್ಥಾಪಕರಾದ ಸುಂದರ್ ಮೇರಾ ಇವರು ಮಾತನಾಡಿ ಆಧುನಿಕ ಪ್ರಪಂಚದಲ್ಲಿ ಜನರ ಜೀವನ ಶೈಲಿ ಮೊಬೈಲ್, ಅಂತರ್ಜಾಲಗಳಿಂದ ನಕಾರಾತ್ಮಕವಾಗಿ ಬದಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜೀವನ ಮೌಲ್ಯವನ್ನು ಬೋಧಿಸುವ ಶಿಕ್ಷಣ ಸಂಸ್ಥೆ ಶ್ರೀರಾಮ ವಿದ್ಯಾಕೇಂದ್ರ. ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಿ ಲಕ್ಷೆಪಲಕ್ಷ ಜನರಿಗೆ ದಾರಿ ದೀಪವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀ ಗಣೇಶ್ ಹೋಟೇಲ್ ಮಾಲಕರಾದ ರಾಜೇಂದ್ರ ಎನ್ ಹೊಳ್ಳ, ಮೀನಾಕ್ಷಿ ಸುಂದರ್, ಶ್ರೀರಾಮ ವಿದ್ಯಾಕೇಂದ್ರದ ಸಹ ಸಂಚಾಲಕರಾದ ರಮೇಶ್ ಎನ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವಸಂತಿ ಕುಮಾರಿ, ಪ್ರೌಢಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾರೀರಿಕ ಹಾಗೂ ಬೌದ್ಧಿಕ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು 9ನೇ ತರಗತಿಯ ಸೌಭಾಗ್ಯ ನಿರೂಪಿಸಿ, 10ನೇ ತರಗತಿಯ ವೈಷ್ಣವಿ ಸ್ವಾಗತಿಸಿ, 10ನೇ ತರಗತಿಯ ಅರ್ಚನಾ ವಂದಿಸಿದರು.

