ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕೈತುತ್ತು ಮತ್ತು ಹೆತ್ತವರ ಪಾದಪೂಜೆ ಕಾರ್ಯಕ್ರಮ ಇಂದು ನಡೆಯಿತು. 1ನೇ ಮತು 2ನೇ ತರಗತಿಯಲ್ಲಿರುವ ಮಕ್ಕಳ ಹೆತ್ತವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಪಾದ ಪೂಜೆ ಕಾರ್ಯಕ್ರಮದಲ್ಲಿ ಹೆತ್ತವರನ್ನು ಮೊದಲಿಗೆ ಕುಳ್ಳಿರಿಸಿ, ಪರದೆಯನ್ನು ಅಡ್ಡ ಹಿಡಿಯಲಾಗಿತ್ತು. ಮಕ್ಕಳು ತಮ್ಮ ಹೆತ್ತವರ ಪಾದವನ್ನು ಗುರುತಿಸಿ ಅವರ ಮುಂದೆ ಕುಳಿತುಕೊಂಡ ನಂತರ ಪರದೆಯನ್ನು ಸರಿಸಲಾಯಿತು. ನಂತರ ಮಕ್ಕಳು ತನ್ನ ಹೆತ್ತವರ ಪಾದ ತೊಳೆದು ಅರಸಿನ ಕುಂಕುಮ ಹಚ್ಚಿ, ಪಾದಗಳಿಗೆ ಹೂವಿನ ಅರ್ಚನೆ ಮಾಡಿ ಪಾದಗಳಿಗೆ ನಮಸ್ಕಾರ ಮಾಡಿದರು, ಹಾಗೆಯೇ ಹೆತ್ತವರು ತಮ್ಮ ಮಕ್ಕಳಿಗೆ ಅಕ್ಷತೆ ಹಾಕಿ ಆರ್ಶೀವಾದ ಮಾಡಿ ಸಿಹಿ ತಿನಿಸಿದರು.

ನಂತರ ಕೈತುತ್ತು ಕಾರ್ಯಕ್ರಮ ನಡೆಯಿತು. ತಾಯಿ ಮತ್ತು ಮಗುವಿನ ಬಾಂಧ್ಯವವನ್ನು ಹೆಚ್ಚಿಸುವ ಈ ಕಾರ್ಯಕ್ರಮದಲ್ಲಿ 1 ಮತ್ತು 2ನೇ ತರಗತಿಯ ಮಕ್ಕಳ ತಾಯಂದಿರು ಭಾಗವಹಿಸಿ, 1ನೇ ತರಗತಿಯ ಮಕ್ಕಳಿಗೆ 2ನೇ ತರಗತಿಯ ಪೋಷಕರು ಕೈತುತ್ತು ನೀಡಿದರು. ಈ ಮೂಲಕ ತಮ್ಮ ಮಗುವಿನ ಜೊತೆ ಇರುವ ಬಾಂಧವ್ಯದೊಡನೆ ಇತರ ಮಗುವಿನ ಜೊತೆ ಬಾಂಧವ್ಯ ಬೆಸೆಯಲು ಈ ಕಾರ್ಯಕ್ರಮವು ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ತಾಯಿಯ ವಿಶೇಷತೆಯನ್ನು ಸಾರುವ ಹಾಡುಗಳನ್ನು ಹಾಡಿದರು.
ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಸಹಧರ್ಮಿಣಿ ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಶ್ರೀರಾಮ ಪದವಿ ವಿಭಾಗದ ಪ್ರಾಶುಂಪಾಲ ಕೃಷ್ಣ ಪ್ರಸಾದ್ ಕಾಯರ್ಕಟ್ಟೆ, ಪದವಿಪೂರ್ವ ವಿಭಾಗದ ಪ್ರಾಚಾರ್ಯ ವಸಂತ ಬಲ್ಲಾಳ್ ಹಾಗೂ ಶಾಲಾ ಮುಖ್ಯಶಿಕ್ಷಕಿ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಸುಮಿತ್ರಾ ನಿರೂಪಿಸಿದರು. ಅಧ್ಯಾಪಕ ವೃಂದದವರು ಸಹರಿಸಿದರು.


