ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಸರಸ್ವತಿ ಪೂಜೆ ನಡೆಯಿತು.



ಕಲ್ಲಡ್ಕ: ಶ್ರೀರಾಮ ಒಬ್ಬ ಆದರ್ಶ ಪುರುಷ, ಅವನ ಗುಣಗಳನ್ನು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಏಕಾಗ್ರತೆಯ ಕಥೆಯನ್ನು ತಿಳಿಸುತ್ತಾ ಏಕಾಗ್ರತೆಯ ಮಹತ್ವನ್ನು ತಿಳಿಸಿದರು. ಈ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಶಿಸ್ತನ್ನು ಕಂಡು ನನಗೆ ತುಂಬಾ ಸಂತೋಷವಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿಯ ಕಡೆಗೆ ಹೋಗಬೇಕಾದರೆ ಜ್ಞಾನರ್ಜನೆಯಾಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಮಾಡಬೇಕು ಎಂದು ಮಂಗಳೂರು ಶ್ರೀರಾಮಕೃಷ್ಣಾಶ್ರಮದ ಬಾಲಕಾಶ್ರಮದ ಪ್ರಮುಖ ಸ್ವಾಮಿ ರಘರಾಮಾನಂದಜೀ ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸರಸ್ವತಿ ಪೂಜೆಯಲ್ಲಿ ಮಾರ್ಗದರ್ಶನ ಮಾಡಿದರು.
ಪ್ರಾರಂಭದಲ್ಲಿ ತಟ್ಟೆಯಲ್ಲಿ ಸರಸ್ವತಿ ಭಾವಚಿತ್ರ ಹಾಗೂ ಹೂವಿನೊಂದಿಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳು ಮಂದಿರದ ಮುಂಭಾಗದಲ್ಲಿ ಸಾಲಾಗಿ ಪೂಜೆಗೆ ಉಪಸ್ಥಿತರಾದರು. ಕಶೆಕೋಡಿ ಸೂರ್ಯಭಟ್ ಹಾಗೂ ಅವರ ಬಳಗದವರು ಸರಸ್ವತಿ ಮಂತ್ರವನ್ನು ಪಠಿಸಿ ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ಶಿಶು ಮಂದಿರದಿಂದ ಪದವಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಪೂಜೆಗೆ ಕುಳಿತು ಪೂಜಾ ವಿಧಾನಗಳನ್ನು ಮಾಡಿದರು.
ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅವರು ಸ್ವಾಮೀಜಿ ಅವರಿಗೆ ಫಲಪುಷ್ಪ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ಎನ್., ಎಲ್ಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಶಿಕ್ಷಕೇತರರು, ಪೋಷಕರು ಉಪಸ್ಥಿತರಿದ್ದರು.