ಮುಂಬಯಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಣಿ ಸದಸ್ಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಇಂದು ಮುಂಬಯಿ ಮಹಾನಗರದ ಹೆಸರಾಂತ ಸಂಘಟಕ, ಸಮಾಜ ಸೇವಕ, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಗೋಪಾಲ್ ಶೆಟ್ಟಿ (ಸಂಸದ), ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ಭೇಟಿ ನೀಡಿ ಗುರುವಂದನೆ ಸಲ್ಲಿಸಿದರು.


ಶ್ರೀ ರಾಮ ವಿದ್ಯಾ ಕೇಂದ್ರ ಟ್ರಸ್ಟ್ ಕಲ್ಲಡ್ಕ ಇಲ್ಲಿನ ರಾಜೇಂದ್ರ ಸೌಧಕ್ಕೆ ಭೇಟಿ ನೀಡಿದ ಹರೀಶ್ ಶೆಟ್ಟಿ ಅವರು ಡಾ| ಪ್ರಭಾಕರ್ ಭಟ್ ಜೊತೆ ಕೊರೋನ ಮಹಾಮಾರಿಯ ಸಂಧಿಗ್ಧ ಪರಿಸ್ಥಿತಿಯಲ್ಲಿ ಭಾರತೀಯರ ಜೀವನ, ವ್ಯಾಪಾರ ವಹಿವಾಟು ಮತ್ತು ಜೀವನೋಪಾಯದ ಭವಿಷ್ಯತ್ತಿನ ನಡೆ ಇತ್ಯಾದಿ ವಿಷಯಗಳೊಂದಿಗೆ ಕುಶಲೋಪರಿ ನಡೆಸಿದರು.
ಜಾಗತಿಕವಾಗಿ ಪಸರಿಸಿದ್ದ ಕೋವಿಡ್ ಸಾಂಕ್ರಮಿಕ ರೋಗದಿಂದಾಗಿ ಕಳೆದ ಸುಮಾರು ಮೂರುವರೆ ತಿಂಗಳಿಂದ ದೇಶ-ವಿದೇಶಗಳಲ್ಲಿ (ವಿಶೇಷವಾಗಿ ಮುಂಬಯಿನಲ್ಲಿ) ಸಿಲುಕಿ ತೊಂದರೆಗೆ ಒಳಗಾಗಿದ್ದ ಅನಿವಾಸಿ ಕನ್ನಡಿಗರನ್ನು ತವರೂರ ತಮ್ಮತಮ್ಮ ಮನೆಗೆ (ತವರು ಮನೆಗೆ) ಕರೆಸಿಕೊಳ್ಳುವರೇ ಕರ್ನಾಟಕ ಸರಕಾರ, ಜಿಲ್ಲಾಡಳಿತಗಳಿಗೆ ಸಲಹಿ ಅನಿವಾಸಿಗರ ಮನೋಸ್ಥೈರ್ಯ ತುಂಬಿ ಧನಾತ್ಮಕ ಹೇಳಿಕೆಯನ್ನಿತ್ತು ನಾವೂ ತಮ್ಮೊಂದಿಗೆ ಇರುವುದಾಗಿ ಭರವಸೆಯನ್ನಿತ್ತು ಅನಿವಾಸಿ ಕನ್ನಡಿಗರಿಗೆ ಆದರದಿಂದ ಬರಮಾಡಿಕೊಂಡ ಪ್ರಭಾಕರ್ ಭಟ್ ಅವರ ಸಮಯೋಚಿತ ಕಾರ್ಯವೈಖರಿಗೆ ಎರ್ಮಾಳ್ ಹರೀಶ್ ಪ್ರಶಂಸಿಸಿ ಅಭಿವಂದಿಸಿದರು.

