ಬಂಟ್ವಾಳ : ರಾಷ್ಟ್ರದ ರಕ್ಷಣೆಗೆ ಸೈನಿಕರು, ಪೋಲೀಸರು ಶ್ರಮಿಸಿದರೆ, ರಾಷ್ಟ್ರದ ಪೋಷಣೆಯ ಕಾರ್ಯವನ್ನು ಶಿಕ್ಷಕರು ಮಾಡುವರು. ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಕನಿಂದ ಮಾತ್ರ ಸಾಧ್ಯ. ಸಮಾಜದ ಪರಿವರ್ತನೆಯ ಕಾರ್ಯದಲ್ಲಿ ನಿಂತಿರುವುದು ಶಿಕ್ಷಣ ಕ್ಷೇತ್ರ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ, ತಿಳಿಸಿದರು. ಅವರು ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಭವಿಷ್ಯದ ಶಿಕ್ಷಕರನ್ನು ರೂಪಿಸುವ ಮೂರು ದಿನಗಳ ಕಾಲ ನಡೆದ ’ಭವಿಷ್ ಘಟಕ’ದ ಪ್ರೇರಣಾ ಶಿಬಿರದ ಸಮಾರೋಪ ಭಾಷಣವನ್ನು ಮಾಡುತ್ತಾ ಹೀಗೆ ನುಡಿದರು
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ ಇದರ ಕೋಶಾಧಿಕಾರಿ ರಾಮ್ಪ್ರಸಾದ್ ಕರಿಯಾಲ ಇವರು ಶಿಕ್ಷಕನ ಒಳ್ಳೆಯ ಚಿಂತನೆಯಿಂದ ಆರೋಗ್ಯವಂತ ಸ್ವಸ್ಥ ಸಮಾಜ ನಿರ್ಮಾಣವಾಗುವುದು. ನಮ್ಮ ಹಿರಿಯರ ಆದರ್ಶ, ಗೌರವಕ್ಕೆ ಚ್ಯುತಿ ಬಾರದಂತೆ ನೀತಿಗಳನ್ನು ಮಕ್ಕಳಲ್ಲಿ ಬೆಳೆಸುವವನೇ ಶಿಕ್ಷಕ ಎಂದರು.
ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ಸಹ ಸಂಚಾಲಕರಾದ ರಮೇಶ್ ಯನ್. ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣಪತಿ ಹೆಗಡೆ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ಶುಭಲತಾ ಕಾರ್ಯಕ್ರಮದ ವರದಿ ಮಂಡಿಸಿದರು.
ಕಾಲೇಜಿನ ದಶಮಾನೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಈ ಶಿಬಿರದಲ್ಲಿ ಒಟ್ಟು 41 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಯರಾದ ಶ್ರೇಯಶ್ರೀ ಸ್ವಾಗತಿಸಿ, ದೀಕ್ಷಿತಾ ವಂದಿಸಿ, ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.
