ಬಂಟ್ವಾಳ: ಬಂಟ್ವಾಳ ತಾ.ಉಳಿ ಗ್ರಾಮದ ಕಕ್ಯಬೀಡು ಭಗವಾನ್ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 25ನೇ ವರ್ಷದ ಪ್ರಯುಕ್ತ ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಮುಂದಾಳು ಕಂಡಿಗ ಜಾರಪ್ಪ ಶೆಟ್ಟಿ ಅವರ ಅಭಿನಂದನ ಗ್ರಂಥ ಸತ್ಪಥಿಕ ಇದರ ಬಿಡುಗಡೆ ಕಾರ್ಯಕ್ರಮ ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅ.10ರಂದು ಸಂಜೆ ನಡೆಯಿತು.


ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಅಧ್ಯಕ್ಷತೆ ವಹಿಸಿ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಹಿಡಿ ಅಕ್ಕಿ ಎಂಬ ಪರಿಕಲ್ಪನೆಯಿಂದ ದೇವಸ್ಥಾನ ನಿರ್ಮಾಣಕ್ಕೆ ಕಾರಣರಾಗಿ, ಕುಗ್ರಾಮವಾದ ಕಕ್ಯಪದವಿನಲ್ಲಿ ಶಾಲೆ ಸ್ಥಾಪಿಸಿ ಶಿಕ್ಷಣ ವಂಚಿತರಿಗೆ ವಿದ್ಯಾದಾನಿಗಳಾಗಿ, ಪರೋಪಕಾರಕ್ಕಾಗಿ ಜೀವನ ಮುಡಿಪಾಗಿರಿಸಿದ ಜಾರಪ್ಪ ಶೆಟ್ಟಿ ಅವರ ಆದರ್ಶ ಜೀವನ ಮಾದರಿಯಾದುದು ಎಂದು ಹೇಳಿದರು.
ಸಮಾಜದ ಪರಿಕಲ್ಪನೆಯಿಂದ ಧರ್ಮನಿಷ್ಠೆ, ಫಲಾಪೇಕ್ಷೆಯಿಲ್ಲದ ಸರಳ ಜೀವನದ ಹಿರಿಯರನ್ನು ಗೌರವಿಸುವುದರಿಂದ ಇತರರಿಗೆ ಪ್ರೇರಣೆಯಾಗಲಿ ಎಂದು ಅವರು ಹೇಳಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸಂಜೀವ ಶೆಟ್ಟಿ ಮುದ್ದೇನಹಳ್ಳಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಪ್ರಾರ್ಥನೆಗಳಿಗಿಂತ ಸೇವೆ ಶ್ರೇಷ್ಠ ಎಂಬುವುದನ್ನು ಪಾಲಿಸಿದ, ಜನರನ್ನು ಸತ್ಪಥದಲ್ಲಿ ಮುನ್ನಡೆಸಿದ ಜಾರಪ್ಪ ಶೆಟ್ಟರು ಅಭಿನಂದನೀಯರು ಎಂದು ಹೇಳಿದರು. ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್ ನ ಮಧುಸೂದನ ನಾಯಕ್ ಅಭಿನಂದನ ಭಾಷಣ ಮಾಡಿದರು. ಯಕ್ಷಗಾನ ಅರ್ಥಧಾರಿ ಹರೀಶ್ ಭಟ್ ಬಳಂತಿಮೊಗರು ಸಂಪಾದಕರ ಮಾತುಗಳನ್ನಾಡಿದರು.
ಪುತ್ತೂರು ವೈದ್ಯ ಡಾ| ಎ.ಕೆ. ರೈ, ದೇರಳಕಟ್ಟೆ ಪ್ರೊ|ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡಾ| ವಿಕ್ರಮ್ ಶೆಟ್ಟಿ, ಉಪ್ಪಿನಂಗಡಿ ದಂತ ವೈದ್ಯ ಡಾ| ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಉದ್ಯಮಿ ಅನಂತ ಶೆಣೈ. ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾದ ಜೀರ್ಣೋದ್ಧಾರ ಸಮಿತಿ ನಿಕಟಪೂರ್ವ ಅಧ್ಯಕ್ಷ ಉಳಿ ದಾಮೋದರ ನಾಯಕ್, ಅಧ್ಯಕ್ಷ ಡಾ| ಸತ್ಯಶಂಕರ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಂಡಿಗ ಜಾರಪ್ಪ ಶೆಟ್ಟಿ ಮತ್ತು ಪತ್ನಿ ಶಾಂಭವಿ ಶೆಟ್ಟಿ, ಡಾ.ಮೋಹನ ಆಳ್ವ, ಹರೀಶ್ ಭಟ್ ಬಳಂತಿಮೊಗರು, ಅನಂತ ಶೆಣೈ ಅವರನ್ನು ಸಮ್ಮಾನಿಸಲಾಯಿತು.
ಭಾಗವತರಾದ ಗಿರೀಶ್ ರೈ ಮತ್ತು ಕಾವ್ಯಶ್ರೀ ಅಜೇರು ಪ್ರಾರ್ಥಿಸಿದರು. ಸಮಿತಿ ಸಂಚಾಲಕ ಯೋಗೀಶ್ ಕುಮಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ದೇಗುಲದ ಮ್ಯಾನೇಜರ್ ವೀರೇಂದ್ರ ಕುಮಾರ್ ಜೈನ್ ಅಭಿನಂದನ ಪತ್ರ ವಾಚಿಸಿದರು. ನಿವೃತ್ತ ಶಿಕ್ಷಕ ಜಗನ್ನಾಥ ಶೆಟ್ಟಿ ವಂದಿಸಿದರು. ಶಿಕ್ಷಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

