ಬಂಟ್ವಾಳ: ಜನರು ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಸಹಕಾರ ನೀಡದೇ ಇದ್ದಲ್ಲಿ ಕೋವಿಡ್ ನಿಗ್ರಹ ಕಷ್ಟ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.


ಅವರು ಬಡಗಬೆಳ್ಳೂರು ಗ್ರಾಮ ಪಂಚಾಯತ್ ನಲ್ಲಿ ಬುಧವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 24 ಸಕ್ರಿಯ ಪ್ರಕರಣಗಳಿದೆ. 22 ಮಂದಿ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರು ಆಸ್ಪತ್ರೆಯಲ್ಲಿದ್ದಾರೆ. ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅನ್ನು ಶೀಘ್ರ ಕೊರೋನಾ ಮುಕ್ತಗೊಳಿಸುವಂತೆ ಅವರು ಸಲಹೆ ನೀಡಿದರು.
ಬಡಗಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.22ರಷ್ಟು ಮಾತ್ರ ಪ್ರಗತಿಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕರ್ತರು ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕು. ಇದಕ್ಕೆ ಟಾಸ್ಕ್ ಫೋರ್ಸ್ ಸಮಿತಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಸರ್ಕಾರದ ಹೊಸ ನಿಯಮದಂತೆ ಲಸಿಕೆ ಪಡೆಯಬೇಕಾದ ಎಲ್ಲರೂ ಮುಂಚಿತವಾಗಿ ನೋಂದಾವಣೆ ಮಾಡಬೇಕು ಎಂದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್. ಮಾಹಿತಿ ನೀಡಿ, ನ್ಯಾಯ ಬೆಲೆ ಅಂಗಡಿಗಳನ್ನು ಅಪರಾಹ್ನ 2 ಗಂಟೆವರೆಗೆ ತೆರಯಲು ಅನುಮತಿ ನೀಡಲಾಗಿದ್ದು ಅಲ್ಲಿಗೆ ಹೋಗುವವರನ್ನು ಪೋಲೀಸರು ತಡೆಯದಂತೆ ಸಭೆಯಲ್ಲಿ ತಿಳಿಸಿದರು.
ಪಂಚಾಯತ್ ನ ಎಲ್ಲಾ ಸದಸ್ಯರು ತೊಡಗಿಸಿಕೊಳ್ಳುವಂತೆ ಎಂದು ತಾ.ಪಂ. ಇ.ಒ.ರಾಜಣ್ಣ ತಿಳಿಸಿದರು.
ವೇದಿಕೆಯಲ್ಲಿ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಆಳ್ವ ಗುಂಡಾಲ, ಉಪಾಧ್ಯಕ್ಷೆ ಮಮತಾ, ಬೂಡ ಆಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್., ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಂಟ್ವಾಳ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ, ಗ್ರಾ.ಪಂ. ಪಿ.ಡಿ.ಒ ಆನಂದ ಎಚ್.ಮಡಿವಾಳ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಕರಣಿಕೆ ಜ್ಯೋತಿ ಬಾಯಿ, ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ರಮನಾಥ ರಾಯಿ, ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಹಾಜರಿದ್ದರು.













