ಮತ್ತೆ ಬಂದಿದೆ ಲೋಕಸಭಾ ಚುನಾವಣೆ. ಸರಕಾರದ ಸೂತ್ರ ನಮ್ಮ ಕೈಲಿಲ್ಲ. ಆದರೆ ಮತದಾನ ಮಾಡಿ ನಾಯಕರನ್ನು, ಪಕ್ಷವನ್ನು ಆರಿಸುವ ಜವಾಬ್ದಾರಿ, ಕರ್ತವ್ಯ ನಮ್ಮದು. ನಮ್ಮ ಸಂವಿಧಾನದ ಪ್ರಕಾರ ಯಾವಾಗ ಏನು ಬೇಕಾದರೂ ಆಗಬಹುದು. ಅಂದರೆ ಗರಿಷ್ಠ ಮತಗಳು ಬಂದಿದ್ದರೂ ವಿಶ್ವಾಸ ಮತಗಳಿಕೆಯಲ್ಲಿ ವಿಫಲರಾದರೆ, ಸಮ್ಮಿಶ್ರ ಸರಕಾರ ಬರಬಹುದು, ಕರ್ನಾಟಕದಲ್ಲಿ ನಡೆದಂತೆ. ಆದರೆ ನಮಗೆ ಪಕ್ಷ ಮುಖ್ಯವಾಗಬಾರದು, ಬದಲಾಗಿ ನಾಯಕ ಮುಖ್ಯವಾಗಿರಬೇಕು. ನಮ್ಮ ಜನಪ್ರತಿನಿಧಿ ನಿಜವಾದ ಪ್ರಾತಿನಿಧ್ಯವನ್ನು ಮೆರೆವವ, ಕಲಿತವ, ತಿಳಿದವ, ನಮ್ಮ ಊರನ್ನು ಮುಂದೆ ತರುವವ, ತನ್ನ ಇರವನ್ನು ಪ್ರಜಾಸೇವೆಯಲ್ಲಿ ತೊಡಗಿಸಿಕೊಂಡವ ಆಗಿರಬೇಕು.
ಸಾಕಷ್ಟು ಹಣವಿರುವವ ಚುನಾವಣೆಯಲ್ಲಿ ನಾಯಕ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾನೆ ಎಂದಾದರೆ ಹಲವರು ಕುರಿಗಳಂತೆ ಅವನ ಹಿಂದೆ ಹಣಕ್ಕಾಗಿ ಸುತ್ತುತ್ತಿರುತ್ತಾರೆ! ಅವನಿಗೆ ಸಂಗಡಿಗರು ಹೆಚ್ಚಾಗಿರುತ್ತಾರೆ. ಹೆಂಡ, ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳದೆ ನಿಜ ಜೀವನದಲ್ಲಿ ಹೀರೋಗಳಾದ ಕಷ್ಟಪಟ್ಟು ದುಡಿಯುವ, ಕಷ್ಟದ ಮಹತ್ವ ತಿಳಿದು ದೇಶವನ್ನು ಮುನ್ನಡೆಸುವವರನ್ನು ಆರಿಸೋಣ.
ಸರದಾರ್ ವಲ್ಲಭ ಬಾಯಿ ಪಟೇಲ್ ರಂಥ, ಲಾಲ್ ಬಹಾದ್ದೂರ್ ಶಾಸ್ತ್ರೀಜೀಯಂಥ ದಕ್ಷ ನಾಯಕರು ನಮಗೆ ಸಿಗಲಿ. ಭಾರತದ ಕೀರ್ತಿ ಪತಾಕೆಯನ್ನು ಪ್ರಪಂಚದಾದ್ಯಂತ ಸಾರಲಿ, ಸೈನಿಕರನ್ನು ಕೊಂದ ಪಾಪಿ ಪಾಕಿಸ್ಥಾನಕ್ಕೆ ಸರಿಯಾದ ಬುದ್ಧಿ ಕಲಿಸುವ ನಾಯಕರು ಬರಲಿ, ಹಗರಣಗಳನ್ನು, ಬ್ಯಾಂಕ್ ಹಗಲು ದರೋಡೆ ಮಾಡಿದ ಖದೀಮರನ್ನು ಸೆರೆಮನೆಗೆ ತಳ್ಳಿ ಅವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುವಂತಾಗಲಿ, ನಾವು ದುಡಿದ ಹಣಕ್ಕೆ ನಾವೇ ಸೇವಾ ತೆರಿಗೆ,ಇತರ ತೆರಿಗೆ ನೀಡಿ ಬ್ಯಾಂಕಿನವರಿಗಷ್ಟು ತಿನ್ನಿಸದೆ ನಮ್ಮ ಬೆವರಿನ ಹಣ ನಮ್ಮ ಮಕ್ಕಳನ್ನು ಸೇರುವಂತಾಗಲಿ. ಸಕಲ ರಾಷ್ಟ್ರಗಳೊಂದಿಗೆ ಸೌಹಾರ್ಧತೆ ಮೂಡಲಿ. ವಿಜ್ಞಾನ ತಂತ್ರಜ್ಞಾನ ಮತ್ತಷ್ಟು ಬೆಳೆಯಲಿ, ಭಾರತದ ಸಂಸ್ಕೃತಿ ಹಾಳಾಗದಿರಲಿ. ನಮ್ಮವರೇ ನಮ್ಮನ್ನಾಳಲಿ. ಮತ್ತೆ ದೇಶ ವಿದೇಶಿಯರ ಪಾಲಾಗದಿರಲಿ. ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುವ ನಾಯಕರನ್ನು ಸರ್ವರೂ ಸೇರಿ ಆರಿಸೋಣ, ನೀವೇನಂತೀರಿ?

@ಪ್ರೇಮ್@