ಬಂಟ್ವಾಳ: ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪೆರಿಯೋಡಿಬೀಡು ಬಾಕಿಮಾರು ಗದ್ದೆಯಲ್ಲಿ ಏಪ್ರಿಲ್ 7, ಭಾನುವಾರದಂದು ಬೆಳಿಗ್ಗೆ 6.30ರಿಂದ ಶ್ರೀರಾಮ ನಾಮ ತಾರಕ ಜಪಯಜ್ಞ ನಡೆಯಲಿದೆ. ಮಾ.21ರಂದು ಇಂದು ಗುರುವಾರ ಪೆರಿಯೋಡಿಬೀಡು ಬಾಕಿಮಾರು ಗದ್ದೆಯಲ್ಲಿ ಚಪ್ಪರ ಮುಹೂರ್ತ ನಡೆಯಿತು.
10,000ಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಈ ಯಾಗಭೂಮಿಗೆ ಆಗಮಿಸುವ ನಿರೀಕ್ಷೆಯಿದೆ. ಇದಕ್ಕಾಗಿ ನೂರಾರು ಕಾರ್ಯಕರ್ತರ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕಳ್ಳಿಗೆ, ತುಂಬೆ, ಕೊಡ್ಮಾಣ್, ಮೇರಮಜಲು, ಪುದು ಗ್ರಾಮ ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಮಾಹಿತಿಯಿದೆ. ಸುಮಾರು 5 ಎಕರೆ ಜಾಗವನ್ನು ಪಾರ್ಕಿಂಗ್ ಗಾಗಿ ಆಯ್ಕೆಮಾಡಲಾಗಿದೆ. ಸುತ್ತಮುತ್ತಲಿನ 10ಕ್ಕೂ ಅಧಿಕ ಗ್ರಾಮಗಳಲ್ಲಿ ರಾಮಭಕ್ತರು ಈಗಾಗಲೇ ವೃತಾಚರಣೆಯಲ್ಲಿ ತೊಡಗಿದ್ದು, ಪ್ರತಿನಿತ್ಯ ರಾಮನಾಮದ ಮಂತ್ರ ಪಠಿಸುತ್ತಿದ್ದಾರೆ. ಒಟ್ಟು 1 ಕೋಟಿ ರಾಮಮಂತ್ರ ಜಪ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


