ಬಂಟ್ವಾಳ, ಜೂ. ೧: ಬಂಟ್ವಾಳದಲ್ಲಿ ಸೌಹಾರ್ದವನ್ನು ಸಾರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು, ಇಲ್ಲಿನ ಬಹುಸಂಖ್ಯಾತರು ಮತ್ತು ಕ್ರೈಸ್ತ ಸಮುದಾಯದ ಜನ ಕೋಮು ಸಾಮರಸ್ಯವನ್ನು ಬಯಸುವವರೇ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ.
ಬಂಟ್ವಾಳ ತಾಲೂಕಿನ ಕೊಳಕೆ ನಿವಾಸಿ, “ಕಂಬಳಬೆಟ್ಟು ಭಟ್ರೆನ ಮಗಳು” ಚಲನಚಿತ್ರದ ನಿರ್ಮಾಪಕ ರೊನಾಲ್ಡೊ ಮಾರ್ಟಿಸ್ ಅವರು ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ಮೇ ೩೧ರಂದು ಕೊಳಕೆಯ ಮುಹಿಯುದ್ದಿನ್ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದಲ್ಲದೆ, ತನ್ನ ಸ್ನೇಹಿತರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಸಹಕರಿಸಿದರು. ಈ ಸಂದರ್ಭದಲ್ಲಿ ಕೊಳಕೆ ಜಮಾಅತ್ನ ಸುಮಾರು ೨೦೦ ಮಂದಿ ಮಸೀದಿಯಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿ, ಉಪವಾಸ ತೊರೆದು ಸಾಕ್ಷಿಯಾದರು.
ಬಂಟ್ವಾಳ ತಾಲೂಕಿನ ಕೋಡಪದವು, ವಿಟ್ಲ, ಬೊಳ್ಳಾಯಿ, ಕಲ್ಲಡದಕ, ಇರಾ ಹೀಗೆ..ವಿವಿಧ ಕಡೆಗಳಲ್ಲಿ ಊರಿನ ಮುಸ್ಲಿಂ ಬಾಂಧವರಿಗೆ ವಿಶೇಷ ಇಫ್ತಾರ್ ಕೂಟ ಏರ್ಪಡಿಸಿ ಮಾನವೀಯತೆಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬುದನ್ನು ಸಮಾಜಕ್ಕೆ ಸಾರಿದ್ದಾರೆ. ಜಿಲ್ಲೆಯಲ್ಲಿ ರಾಜಕೀಯ ಕಾರಣಕ್ಕಾಗಿ ಮಾತ್ರ ಸಂಘರ್ಷಗಳು ನಡೆಯುತ್ತಿವೆಯೇ ಹೊರತು ಜನರ ಮಧ್ಯೆ ಯಾವುದೇ ತಾರತಮ್ಯ ಇಲ್ಲ ಎಂಬುದನ್ನು ಇಂತಹ ಸೌಹಾರ್ದ ಕಾರ್ಯಕ್ರಮಗಳು ಸಾರಿ ಹೇಳುತ್ತಿವೆ.
